Advertisement
ಆಶಾ ಜಗದೀಶ್ ಬರೆದ ಈ ದಿನದ ಕವಿತೆ

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

ಕನಸುಗಳಿಗೆ ನೂರು ರೆಕ್ಕೆ

ನನಗ್ಯಾಕೋ ನನ್ನ ಬಗ್ಗೆಯೇ ಅನುಮಾನ
ಯಾವ ಕಾಯಿಲೆ ನನಗೆ?!
ಕೂತಲ್ಲೇ ಕೂರಲಾಗುವುದಿಲ್ಲ
ನಿಂತಲ್ಲೆ ನಿಲ್ಲಲೂ ಆಗುತ್ತಿಲ್ಲ
ಆದರೆ ನಿಮ್ಮ ಗೆಸ್ ತಪ್ಪು
ಇದು ಆ ಕಾಯಿಲೆಗಳಲ್ಲಿ
ಯಾವುದೂ ಅಲ್ಲ…

ಮುಂಜಾವಿನ ಚುಮುಚುಮು
ಚಳಿಯಲ್ಲಿ ಸುರಿವ ಮಂಜಿಗೆ ಹೆದರಿ
ಬೆಚ್ಚಗೆ ಶೂನೊಳ ಸೇರಿದ ನಾಗರದಂತೆ
ಯಾವುದೋ ಅರಿವಿರದ ಅಜ್ಞಾತ
ಸ್ಥಳವೊಂದರಲ್ಲಿ ಚೆಚ್ಚಗೆ ಮಲಗುವ
ಜನರೇ ಇಲ್ಲದ ಭೂಮಿಯ ಮೇಲೆ
ಏಕಾಂಗಿ ಅಲೆಯುವ
ಸಣ್ಣ ಸಣ್ಣ ತುಂಬೆ ಹೂಗಳ ತನಿರಸವನ್ನು
ದುಂಬಿಯಾಗಿ ಹೀರುವ
ಯಾವ ಗುರುತ್ವಕ್ಕೂ ನಿಲುಕದೆ
ತೇಲಾಡಲು ಮನಸಾಗುವ
ಮನೋವೈಕಲ್ಯಕ್ಕೆ ಯಾವುದೇ ಹೆಸರಿರುವುದಿಲ್ಲ

ಎದೆಯೊಳಗೆ ನೂರು ಚಿಟ್ಟೆ
ರೆಕ್ಕೆ ಬಡಿಯುತ್ತವೆ
ಕರಾಳ ರಾತ್ರಿಯ ಸಂಚಿನ ಕನಸಿಗೆ
ಹೆದರಿ ಪತರಗುಡುತ್ತವೆ
ಕೃಷ್ಣನ ಸಂಚಿಗೆ ಬಲಿಯಾದ ಕರ್ಣನಂತೆ
ರೆಕ್ಕೆಗಳ ದಾನ ಮಾಡಿ
ಅಥವಾ ಕಳೆದುಕೊಂಡು
ಹೇಗೆ ಹೇಳುವುದೋ…
ಸಾವನ್ನೇ ತಂದುಕೊಳ್ಳುತ್ತವೆ

ಯಾವುದನ್ನು ದೊಡ್ಡದು ಎನ್ನುತ್ತೇವೋ
ಆ ದೊಡ್ಡತನ ಸುಮ್ಮನೇ ಬರುವುದಿಲ್ಲ
ಯಾವುದು ಶಕ್ತಿಯೋ ಅದು
ನಮ್ಮೊಳಗೇ ಇದೆ
ಯಾವುದು ನಮ್ಮ ಆಯ್ಕೆಯೋ
ಅದು ನಮ್ಮ ನಮ್ಮ ಮನೋವೈಕಲ್ಯದ ಫಲವೂ

ಇಲ್ಲವಾಗಿದ್ದರೆ…
ಕುರಿ ಮಂದೆಯಲ್ಲೊಂದು ಜಿಂಕೆ
ಕಣ್ಣರಳಿಸಲು ಸಾಧ್ಯ ಹೇಗೆ
ಚರ್ಮವನ್ನು ಕಳಚಿಕೊಳ್ಳುವ ಹಾವಿಗೆ
ಅದನ್ನು ಮರಳಿ ಪಡೆಯುವುದೂ ಗೊತ್ತು
ಕನಸುಗಳಿಗೆ ನೂರು ರೆಕ್ಕೆ
ನಾವೀಗ ನಕ್ಷತ್ರಗಳ ಚಾದರ ಹೊದ್ದು
ಮಲಗಬೇಕಿದೆ…

(ಕಲೆ: ರೂಪಶ್ರೀ ವಿಪಿನ್)

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

1 Comment

  1. Nagraj Harapanhalli

    ಚೆಂದ ಕವಿತೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ