Advertisement
ಆಶಾ ಜಗದೀಶ್ ಬರೆದ ಎರಡು ಕವಿತೆಗಳು

ಆಶಾ ಜಗದೀಶ್ ಬರೆದ ಎರಡು ಕವಿತೆಗಳು

ಸಾವು

ಈಗ ಸಾವು
ಹೊಸ್ತಿಲಿಗೆ ಬಂದು ನಿಂತಿದೆ
ಅದನ್ನು ಒಳ ಕರೆಯಬೇಕೋ
ನಾನೇ ಹೊರ ಹೋಗಬೇಕೋ ತಿಳಿಯುತ್ತಿಲ್ಲ

ಕೊನೆಯದಾಗೊಮ್ಮೆ ನಿನ್ನೊಂದಿಗೆ
ಕಳೆದ ಪುರಾತನ ಕ್ಷಣವೊಂದನ್ನು
ಸೋರುವ ಮೊಲೆತೊಟ್ಟಿನ ಬುಡದಲ್ಲಿ ಹಚ್ಚಿಟ್ಟು
ಎರೆಡೆಸಳು ಚಿಗುರುವವರೆಗೂ
ಅದನ್ನು ಕಾಯಿಸಬೇಕೆನಿಸುತ್ತಿದೆ

ನೀ ನನ್ನ ಸುಪ್ತ ತಿಳುವಳಿಕೆ
ಮರು ಕ್ಷಣ ನಿನ್ನ ದೇಹ
ಯಾವ ಪಲ್ಲಟಕ್ಕೆ ಹೊರಳಬಹುದೆನ್ನುವ
ಸಣ್ಣ ಸೂಕ್ಷವೂ ಅರಿವಿಲ್ಲದೇ
ತಿಳಿದುಹೋಗುತ್ತದೆ ನನಗೆ
ಇದೇ ಈಗ ನೀನು
ರತಿ ಶಿಖರ ಮುಟ್ಟಿ
ಸ್ಖಲಿಸಬಹುದೆನ್ನುವುದೂ ಸಹ

ನಿಲ್ಲು ಸಾವೇ
ನನ್ನ ದೇಹದ ಮೇಲಿನ ಅವನ
ಬೆರಳಚ್ಚುಗಳ ಎಣಿಕೆಯಿನ್ನೂ ಮುಗಿದಿಲ್ಲ
ಅವನು ಆಸೆ ಪಡುವ ನಡುವಿನ
ಮಡಿಕೆಗಳು ಅವನ ಕೊನೆ
ಸ್ಪರ್ಷಕ್ಕಾಗಿ ಕಾಯುತ್ತಿವೆ
ಒಂದಿಡೀ ದಿನ ಹಾದರ ಮಾಡಿ
ಅವನ ನಿಷ್ಠೆಯನ್ನು ಹೊತ್ತು ತರುತ್ತೇನೆ
ನಿಂತು ಬಿಡು

ಅವನುದರದಲ್ಲಿ ಕಡಿದ ಕರುಳ
ಹೂತಿಟ್ಟು ಮಮತೆಯ
ಮೊಳೆಯಿಸಲು ಹೇಳಿಬರುತ್ತೇನೆ
ಒಂಟಿ ರಾತ್ರಿಗಳ ಇರುಳಲ್ಲಿ
ಗಾಳಿಯಾಗಿ ಮೆಟ್ಟುತ್ತೇನೆಂದು
ಹಸಿ ತುಟಿಗಳಿಂದೊಮ್ಮೆ
ಪಿಸುಗುಟ್ಟಿ ಬರುತ್ತೇನೆ

ಮತ್ತೆ ಅವನು
ನಾನು ಮಲಗಿದ
ಇದೇ ಹಾಸಿಗೆಯ ಮೇಲೆ
ಮತ್ಯಾರೊಂದಿಗೋ ಸುಖಿಸುವ
ಕಲ್ಪನೆಯಲ್ಲಿ ನಿನ್ನನ್ನು
ಒಳ ಕರೆಯದೆ
ನಾನೂ ಹೊರ ಬರದೆ
ಹೊಸ್ತಿಲ ಮೇಲೆ ನಿಂತು

ನಿನ್ನನ್ನೇ
ಅಪ್ಪುತ್ತೇನೆ

ಅರ್ಥಾತ್

ನನ್ನ ಕೂದಲ ಕೊನೆಯಲ್ಲಿ
ಕೊನರುತ್ತಿರುವ
ನೀನಾದರೂ ಯಾರು
ಕನಸುಗಳ ರಾಶಿಮಾಡಿ
ಅಗ್ಗಿಷ್ಟಿಕೆಯ ಹುಡುತ್ತಿರುವೆ
ಏಕೋ

ಅರ್ಧಂಬರ್ಧ ಬರೆದ ರಸೀತಿಯಲ್ಲಿ
ಪರಿಹಾರಕ್ಕಾಗಿ ಅರ್ಜಿ
ಗುಜರಾಯಿಸಿದ್ದೇನೆ
ಅರೆ ನೆಂದ ಅಥವಾ ಅರೆ ಒಣಗಿದ
ಪೇಪರಿನ ಮೇಲೆ
ಬರೆದುದೆಲ್ಲವೂ ಅಳಿಸಿಹೋಗಿದೆ

ಕೂದಲ ಬುಡ ಬಲಿತು
ಬಲಿಷ್ಟವಾಗಿದೆ
ಕೊಡಲಿಯಿಂದಲ್ಲದೆ ತುಂಡಾಗದು
ಮತ್ತೆ ನಿನ್ನ ಕೈಲಿರುವುದು
ಇಬ್ಬದಿಯ ಅಲಗು

ಸುಶಾಂತ ಕ್ಷಣಗಳಲ್ಲಿ
ನಿನ್ನ ನಗು ಸಣ್ಣದೊಂದು
ನೆಮ್ಮದಿಯ ಅಮಲೇರಿಸಿಕೊಂಡು
ಅರಳುತ್ತದೆ
ಮತ್ತಾಕ್ಷಣಗಳಿಗಾಗಿ
ನಾ ಮನ್ವಂತರಗಳನ್ನೂ
ಇದೇ ಹೀಗೆ ಸಲೀಸಾಗಿ
ಜಿಗಿಯುತ್ತಾ ಸಾಗುತ್ತೇನೆ
ಅರ್ಥಾತ್ ನಾನು ನಾನಾಗಿದ್ದು
ನಿನ್ನ ನಗುವ ಕಾಣುವುದು
ನನ್ನಿಚ್ಛೆಯಾಗಿದ್ದಾಗ

ಬಿಡು ನೀನಲ್ಲಿ ಪಟ್ಟಾಗಿ ಕೂತಿರುವುದು
ನನ್ನ ಬರಿಗಣ್ಣಿಗೆ ನಿಚ್ಚಳವಾಗಿ
ಕಾಣುತ್ತಿದೆ
ನಡೆಯದೇ ದಾರಿ ಸವೆಯುವುದಿಲ್ಲ
ಮತ್ತೆ ನಿನ್ನ ಕೈಯಲ್ಲೆಂತದದು
ಹ……ತ್ಯಾ…..ರು…….

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ