Advertisement
ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಗಝಲ್ ಗಳು

ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಗಝಲ್ ಗಳು

ಮಾತು ಕಿತ್ತರು ಅರಳದ ಹಾಗೆ

ನಾವು ಅಪರಾಧಿಗಳಲ್ಲದಿದ್ದರೂ ನಮ್ಮಿಬ್ಬರ ನೆರಳ ಸುತ್ತ ಸರಳು ಬಿಗಿದರು ಅಲುಗಾಡದ ಹಾಗೆ
ಮೌನದ ಬೇಗುದಿ ಬಿಗಿದು ಎದೆಯ ತುಡಿತದ ಮಾತು ಕಿತ್ತರು ಅಲುಗಾಡದ ಹಾಗೆ

ಇರುಳ ತುಡಿತದ ನೆರಿಗೆಯೊಳಗೆ ಮೃಗದ ಕೂಗಾಗಿ ನಿಂತು ಜಪದ ಕಣ್ಣಿಗೆ ಹುಣ್ಣಾಗಿ
ಹೂನಾಲೆಯ ಶವಾಗಾರದ ಎದೆಯ ಮೇಲೆ ಕೊಳ್ಳಿಯಾಗಿ ನಿಂತರು ಅರಳದ ಹಾಗೆ

ಮಧು ಮಂಚದ ಗುಟ್ಟಿನ ದುರ್ಬೀನುಗೊಳಿಸಿ ಸಂಸಾರ ನೌಕೆಗೆ ಹಳಸಾಗಿ ನಿಂತು
ಕನಸಿನ ಅರಮನೆಯ ನೆನಪುಗಳ ಮೇಲೆ ಮೋಸದ ಚಾಟಿ ತುರುಕಿದರು ಮೇಲೇಳದ ಹಾಗೆ

ಬಿದ್ದ ಮಳೆಯನು ವರ್ಗೀಕರಿಸಿ ಕೆಸರ ಪುಟಗಳಲಿ ಸವುಳಾಗಿ ಹಸಿರ ನೆಲೆಗೆ ಬರಡಾಗಿ ಕುಂತು
ನೆಲದ ಎದೆಯಲಿ ಭೇದವ ಸೃಷ್ಟಿಸಿ ಬಾರದ ಜ್ವಾಲೆಯಾಗಿ ನಿಂತರು ಚಿಗುರೊಡೆಯದ ಹಾಗೆ

ಹೆಗಲ ಬೇನೆಗೆ ಬಗಲ ಚೂರಿಯಾಗಿ ನಿಂತು ಹಾಲಾಹಲವ ಗಿರಿ ಕನಸಿಗೆ ಬಿಗಿದು
ಮೊಗ್ಗಿನ ಮನದ ಹಿಗ್ಗಿನ ಸಂತೆಯೊಳಗೆ ಕೀರಲುಗುಟ್ಟಿ ಹುತ್ತ ಕಟ್ಟುವರು ಹೆದರಿಸುವ ಹಾಗೆ

ರೆಕ್ಕೆ ಕೊಲ್ಲುದು ಬ್ಯಾಡ

ಹಾರೊ ಹಕ್ಕಿವೊಳಗ ಹೆಜ್ಜೆ ಹುಡ್ಕೋತ ರೆಕ್ಕೆ ಕೊಲ್ಲುದು ಬ್ಯಾಡ
ನೆಲೆಗಾಗಿ ಅದ್ಭುತ ಗೂಡು ಕಟ್ಟಿದ ಚುಕ್ಕಿಗಳ ಕಲೆವೊಳಗ ವಾಸ್ತು ತುರ್ಕೂದು ಬ್ಯಾಡ

ಕೂಳಿಗಾಗಿ ಸಾಲಾಗಿ ನಿಂತ ಇರುವೆ ಕುತ್ತಿಗೆಯೊಳಗ ಗಂಟ್ಲ ಕೊಯ್ಯುದು ಬ್ಯಾಡ
ಮಣ್ಣ ಉಂಡಿ ಮಾಡಿ ಎದೆ ಕರುಳಿಗೆ ದೂಕೊ ಎರಿಹುಳು ಬೆವರಾಗ ಸಂಶಯ ಹುಡ್ಕೂದು ಬ್ಯಾಡ

ಮಳೆ ಹನಿಗಳ ಲೆಕ್ಕ ಹಾಕ್ತಾ ಒಡ್ಡು ಕಟ್ಟಿ ಫಕೀರನ ಒಲೆ ಆರ್ಸುದು ಬ್ಯಾಡ
ಹೊಗೆ ಜಂತಿವಳಗ ಭರವಸೆ ತುಂಬ್ಕೊಂಡ ಉಡಿಯೊಳಗ ಕಿಚ್ಚು ಹಚ್ಚೂದು ಬ್ಯಾಡ

ಮಾತು ಮಲಗಿಸಿ ದುಡಿಯಾಕ ಅನಿಯಾದ ಮೌನದ ಗ್ವಾಡ್ಯಾಗ ಗಾಳ ಓಡ್ಸೂದು ಬ್ಯಾಡ
ಕ್ವಾರಿ ಕಲ್ಲಾಗ ನಿಜದ ದಾರಿ ಕೆತ್ತೊ ಜೀವದ ಒಡಲಾಗ ಹೆದ್ದಾರಿ ಹೆಣ ಹೊಗ್ಸೂದು ಬ್ಯಾಡ

ನಾಟ್ಯದ ನಾಡಿ ಬೆರಗು ಉಣಿಸೊ ನವಿಲ ಹೆಜ್ಜೆಯೊಳಗ ಕೆಂಗಣ್ಣು ಕುಕ್ಕುದು ಬ್ಯಾಡ ಮಲ್ಲಿಗೆ ಗಂಧ
‘ಗಿರಿ’ ಮೈಯಾಗೆಲ್ಲ ತೀಡಿ ಮನದ ಬಟ್ಟಲು ತುಂಬಿದ ಮಣ್ಣ ವಾಸನೆಯೊಳಗ ಮರಗ ತುಂಬುದು ಬ್ಯಾಡ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ