Advertisement
ಗೀತಾ ವಸಂತ ಬರೆದ ಈ ದಿನದ ಕವಿತೆ

ಗೀತಾ ವಸಂತ ಬರೆದ ಈ ದಿನದ ಕವಿತೆ

ಕಳಚುವ ಪರಿ

ನೀನಿರದ ನೀರವ ರಾತ್ರಿಗಳಲಿ
ಎಲೆ ಕಳಚುವ ಮರ್ಮರ
ಕೇಳುತ್ತಿದೆ ಆತ್ಮದ ಮೊರೆಯಂತೆ.

ಹೊರಗೆ ಸುರಿಯುತ್ತಿದೆ ತಣ್ಣಗೆ
ಬೆಳುದಿಂಗಳು
ಚಿತ್ತಭಿತ್ತಿಯ ಮೇಲೆ
ಸದ್ದಿಲ್ಲದೆ ಸರಿದ
ನಿನ್ನದೇ ನೆರಳು
ಸುಳಿದಾಡಿದೆ ಸುಷುಪ್ತಿಯೊಳಗೂ

ಎದ್ದು ಹೋದವನ
ಕಳ್ಳಹೆಜ್ಜೆಗಳ ಉಲಿಯೂ
ಕಿವಿದೆರೆಗಳ ದಾಟಿ ಒಳಗಿಳಿದಿದೆ.
ತಳಮಳದ ತಳವೊಡೆದು
ನೋವಿನ ಆಲಾಪಗಳು ಹೆದ್ದೆರೆಗಳಾಗಿ
ಎದ್ದೆದ್ದು ಅಪ್ಪಳಿಸುತಿವೆ.

ಕತ್ತಲಲಿ ಕೂಡುವುದು
ಬೆಳಕಿಗೆ ಬೇರಾಗುವುದು
ದ್ವೈತ ಅದ್ವೈತಗಳ
ಪದ ಬಂಧದಾಚೆ
ಅರ್ಥದ ಸರಳು ದಾಟಿ
ಹಬ್ಬುತಿದೆ ಹಂಬಲದ ಹಾಡೊಂದು
ನಾಭಿಮೂಲದಲಿ ಮೊಳೆತು.

ಒಮ್ಮೆ ಝಾಡಿಸು
ಬೇರ್ಪಡುವ ವಿಹ್ವಲತೆಗೆ
ಮೈಯಾಗಬೇಕಿದೆ ನಾನು
ಕಿತ್ತುಕೊಡು ನಿನ್ನ ಬೆನ್ನಿಗಂಟಿದ
ನನ್ನ ಕಣ್ಣು
ನನ್ನದೇ ಬೆಳಕ ನಾ ನೋಡಲು.

ಯಾವ ಸ್ನಾನ
ಯಾವ ಧ್ಯಾನ
ಕಲಿಸೀತು ನಿನ್ನ ಕಳಚುವ ಪರಿಯ
ಹೇಳು ಹೇ ಕಳಚಿಕೊಂಡವನೇ
ಬೆತ್ತಲಾಗಬೇಕಿದೆ ನಾನು
ನೀನಿಲ್ಲದೆಯೂ.

About The Author

ಡಾ. ಗೀತಾ ವಸಂತ

ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ