Advertisement
ಚಿನ್ಮಯ್ ಹೆಗಡೆ ಅನುವಾದಿಸಿದ ಜಪಾನೀ ಕವಿ ಇಸ್ಸಾನ  ಹಾಯ್ಕುಗಳು…. ಕಿರುಗವಿತೆಗಳು…

ಚಿನ್ಮಯ್ ಹೆಗಡೆ ಅನುವಾದಿಸಿದ ಜಪಾನೀ ಕವಿ ಇಸ್ಸಾನ ಹಾಯ್ಕುಗಳು…. ಕಿರುಗವಿತೆಗಳು…

ಹೆದರಬೇಡಿ ಜೇಡಗಳೇ,
ನಾನೇನು ಮನೆಯನ್ನ
ಚೊಕ್ಕವಾಗಿಡುವವನಲ್ಲ.

*

ಬುದ್ಧನನ್ನ
ಧ್ಯಾನಿಸುವಾಗಲೆಲ್ಲಾ ನಾನು
ಸೊಳ್ಳೆ ಹೊಡೆಯುತ್ತಿರುತ್ತೇನೆ.

*

ಹುಟ್ಟಿದಾಗ ಸ್ನಾನ
ಸತ್ತಾಗಲೂ ಸ್ನಾನ,
ಎಂಥ ಮೂರ್ಖತನ.

*

ವಯಸ್ಸೆಷ್ಟೆಂದು ಕೇಳಿದರೆ
ಹೊಸ ಬಟ್ಟೆ ತೊಟ್ಟ ಹುಡುಗ
ಐದೂ ಬೆರಳನ್ನು ಹೊರಚಾಚಿದ.

*

ಮಲಗಿದ್ದ ಬೆಕ್ಕು ಎದ್ದು
ಆಕಳಿಸಿ ಹೊರನಡೆಯುತ್ತದೆ
ಪ್ರೀತಿಸುವುದಕ್ಕಾಗಿ.

*
ಎಂಥ ಬೇಜಾರಿನ ಜಗತ್ತು,
ಚಂದದ ಹೂಗಳೂ
ಉದುರಿ ಹೋಗುತ್ತವೆ
ನಮ್ಮಂತೆಯೇ.

*

ಕಿವಿಯ ಬಳಿ
ಕುಯ್ಗುಡುವ ಸೊಳ್ಳೆ
ನಾನು ಕಿವುಡ ಅಂದುಕೊಂಡಿರಬಹುದೇ?

*

ಅತ್ತ ಇತ್ತ
ನೋಡುತ್ತಿರುವ ಹಕ್ಕಿಯೇ
ಏನಾದರೂ ಕಳಕೊಂಡೆಯಾ?

*

ಚೆರ್ರಿ ಹೂಗಳು
ಅರಳಿ ನಿಂತಾಗಲೂ
ನೋವು ದುಃಖ ಇದ್ದಿದ್ದೇ
ಈ ಜಗತ್ತಿನಲ್ಲಿ.

*

ಬೆಟ್ಟದಲ್ಲಿ ಹೂ ಕದಿಯುವ
ಕಳ್ಳನ ತಲೆ ಮೇಲೆ
ದೇವರಂತೆ ಹೊಳೆಯುತ್ತಾನೆ
ವಸಂತದ ಚಂದ್ರ.

*

ಮಂಡರುಗಪ್ಪೆ ಮತ್ತು ನಾನು
ಎದುರಾಬದುರಾ ಕೂತು
ಒಬ್ಬರನ್ನೊಬ್ಬರು ದಿಟ್ಟಿಸುತ್ತೇವೆ
ಮೌನವಾಗಿ.

*

ತಾಯಿಯಿಲ್ಲದ ಮಗು
ಎಲ್ಲರಿಗೂ ಗೊತ್ತು,
ಎದುರು ಬಾಗಿಲಲ್ಲಿ
ಒಂಟಿಯಾಗಿ ನಿಂತು
ಬೆರಳು ಚೀಪುತ್ತದೆ
ಕಚ್ಚಿ ತಿನ್ನುವ ಹಸಿವಿನಿಂದ.

*

ಗುಡ್ಡವನ್ನ
ಈಗಷ್ಟೇ ಕಂಡಂತೆ
ಹಕ್ಕಿ ಹಾಡುತ್ತಿದೆ.

*

ಮಂಜು ಕರಗಲೂ
ದುಡ್ಡು ಬೇಕು,
ಪೇಟೆ ಬದುಕು.

*

ಪಾತರಗಿತ್ತಿಯೊಂದಿಗೆ
ನೆರಳಲ್ಲಿ ಕೂತಿದ್ದೇನೆ,
ಹಿಂದಿನ ಜನ್ಮದ ಗೆಳೆತನ.

*

ದಿನಗಳು ಚಿಕ್ಕದಾಗಿವೆ,
ಹುಳ ಹುಪ್ಪಟೆಗಳ
ಬದುಕಿನಂತೆ.

*

ಕೈ ಮೇಲೆ
ಪಾತರಗಿತ್ತಿ ನಿದ್ದೆಹೋಗಿದೆ,
ಋಣಾನುಬಂಧ.

*

ಮಳೆಗಾಲದ ದಿನ-
ಒಂಟಿತನ ಮತ್ತು ಶ್ರದ್ಧೆ
ಭತ್ತ ಬಿತ್ತುವುದರಲ್ಲಿ.

*

ವಸಂತದ ಮಳೆಯಲ್ಲಿ
ಅವಳು ಮೈ ಕುಣಿಸುತ್ತಿದ್ದಾಳೆ…
ಹೊಸ ಹೂವು.

*

ಮಳೆ ನಿಂತಿದೆ-
ಗೂಟದ ಮೇಲೊಂದು
ಭವ್ಯವಾದ ಅಣಬೆ.

ಚಿನ್ಮಯ್ ಹೆಗಡೆ ಉತ್ತರಕನ್ನಡ ಜಿಲ್ಲೆಯ ಕುಮಟಾದವರು.
ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಸ್ಸಾ ಅವರ ಇನ್ನೂ ಕವಿತೆಗಳಿಗಾಗಿ ಇಲ್ಲಿ ಒತ್ತಿ

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ