Advertisement
ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ಮಾಯಾಕನ್ನಡಿ

ನನ್ನ ಹಡಗು ಮುಳುಗುತ್ತೆ
ಮಳೆಗಾಲದ ರಾತ್ರಿಯಂಥ
ನಿನ್ನ ಕಂಗಳಲ್ಲಿ
ಈ ನಿಲುವುಗನ್ನಡಿಗೆ
ನೆನಪುಗಳೆನ್ನುವುದೇ ಇಲ್ಲ ಈಗ
ನನ್ನ ಪದಗಳೆಲ್ಲ
ಸುಳುಸುಳು ಮಾಯವಾಗುತ್ತವೆ
ಕನ್ನಡಿ ತುಂಬಿಕೊಳ್ಳುವ ನಿನ್ನೆಲ್ಲ ಪ್ರತಿಬಿಂಬಗಳಲ್ಲಿ

ಇನ್ನೂ
ಈ ಲೋಕಕ್ಕೆ
ನಿನ್ನ ಸುಳಿವು ಎಲ್ಲಿಯೂ
ಹತ್ತುವುದಿಲ್ಲವೆಂದಿದ್ದೆ
ಮೆಲ್ಲ ಗುನುಗಿದ ಅದೇ ಪದ
ಜಳಕದ ಖೋಲಿಯ ಹಬೆಯೊಂದಿಗೆ
ಹಗೂರ ಮೇಲೇರಿ
ಮತ್ತೆ ಅದೇ ಹೊಟ್ಟೆ ಬಾಕ ಕನ್ನಡಿಯೊಳಗೆ!

ಮಾಯಾಕನ್ನಡಿ ನುಂಗಿದ ಪದಗಳು
ನನ್ನ ಕಣ್ಣ ಗೊಂಬೆಯ ಮೇಲೆ
ಮೂಡ ತೊಡಗಿದವು
ಅದೃಷ್ಟವೋ ದುರದೃಷ್ಟವೋ
ಗೊತ್ತಿಲ್ಲ ನನಗೆ
ಬುಳಬುಳನೆ ಉದುರಿದ ಹನಿಗಳು
ಅಳಿಸಿಯೇ ಹಾಕಿದವು ನೋಡು ಭಿತ್ತಿಯೊಳಗಿನ ಚಿತ್ರವ

ಇಲ್ಲ,
ಇನ್ನೂ ಇದು ಸಾಧ್ಯವಿಲ್ಲ

ಪೂಸಿಕೊಂಡ ಕಣ್ಣ ಶೀಶೆಯ ಅತ್ತರಿನ
ಘಮವನೆಲ್ಲಾ ಎಲ್ಲಿ ಅಡಗಿಸಲಿ?
ಪ್ರತಿಬಿಂಬ ನುಂಗಿದ ಪದಗಳು
ಕಣ್ಣ ಗೊಂಬಿಯ ಹೊಕ್ಕು
ಸುರಿದು ಹರಿದು ಮೈಯಗಂಧವಾಗಿ
ಲೋಕದ ತುಂಬೆಲ್ಲಾ ಈಗ
ಅಡಗಿಸಿಟ್ಟ ನಿನ್ನದೇ ಪದಗಳ ಪಾರುಪತ್ಯ!


ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.

ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ