Advertisement
ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

ಕವಲು..

ಕೂಡಿಟ್ಟು ಕೂಡಿಟ್ಟು
ಕಲೆಹಾಕಿದ್ದಕ್ಕೆಲ್ಲ ಲೆಕ್ಕವಿಟ್ಟು
ಬೆನ್ನ ತಟ್ಟಿಕೊಳ್ಳುವುದಕ್ಕಿಂತ
ಮಾಗಿ ಬಾಗಿ ಕಲಿತಿದ್ದೇನೆ
ಮರೆತುಬಿಡುವುದೇ ಲೇಸೆಂದು

ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು

ಬೆನ್ನ ಬಾಗದೆ ನಿಂತು
ಮುಖವ ಕೆಳಗೆ ಹಾಕದೆ ಕನಲಿ
ಸಂಧಾನಕ್ಕೆ ಹಂಬಲಿಸಿ
ದುಷ್ಟಶಕ್ತಿಗಳ ಕಶೇರುಕ ರಜ್ಜೆ
ಮಂಡಲಗಳಲಿ
ತೂರಿ ನಡುಗುವಂತೆ
ಬೆನ್ನ ತಿರುಗಿಸುವುದನ್ನು

ನೇರ ಮಾತುಗಳ ಒಗೆದು
ಒಳಿತನ್ನೇ ಬಗೆದು
ಗೆಲ್ಲಲಾಗದ ಯುದ್ಧಗಳಲಿ
ನಲುಗಿ ಸಿಗದ ಫಲಿತಕ್ಕಾಗಿ
ಹಂಬಲಿಸದೆ
ನಿಲ್ಲಿಸಿದ್ದೇನೆ ಶುರು ಮಾಡುವುದನ್ನು

ಸತ್ಯ ಶೋಧವ ತೋರುವುದಕ್ಕಿಂತ
ಸತ್ಯ ಕಂಡುಕೊಳ್ಳಿರೆಂದು
ದಾರಿಗೆಳೆದು ಅವರನ್ನು
ಕಾಯುವುದನ್ನು ಕಲಿತಿದ್ದೇನೆ
ಅವರೇ ಕಾಣಲೆಂದು
ಆ ಗೆಲುವು ಅವರದೇ ಆಗಲೆಂದು….

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ