Advertisement
ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

 

ಬೀಗಮುದ್ರಾವಧಿ…

ಕೈ ಚಾಚಿ ಕೈ ಹಿಡಿದು ಕುಲುಕಿದರೆ
ಕಲಕಿಬಿಡುತ್ತಿತ್ತು ಅಂದವರ ಘನತೆ
ಹೃದಯವರಳಿಸಿ ಭಾವಬೆರೆಸಿ ತಬ್ಬಿದರೆ
ಜಾರಿ ಬೀಳುತ್ತಿತ್ತವರ ಪ್ರತಿಷ್ಠೆ

ದೀನರೋ, ದಲಿತರೋ, ದುರ್ಬಲರೋ
ಎಲ್ಲರೂ ಅಸ್ಪೃಷ್ಯರೇ
ಬಡವರೋ, ಬಡಪಾಯಿಗಳೋ
ಹಾರುತ್ತಿದ್ದರವರು ಮೂರು ಗೇಣಾಚೆ

ಕರೆದರೂ ಮನೆಗೆ ಬಾರದವರು
ಮನದ ಕದ ತಟ್ಟಲು ಹಿಂತೆಗೆಯುತ್ತಿದ್ದವರು
ಜೊತೆ ಬೆರೆಯಲು ಈಗ ಕನಸ ಹೊಸೆಯುತಿಹರು
ಅಂತವರ ಘನಕ್ಕೂ ಈಗ ಜಿನುಗುವ ಆರ್ದ್ರತೆ

ಬೇಧವೇ ಇಲ್ಲವೀಗ
ಎಲ್ಲರೂ ದೂರ ಮತ್ತು ಬೇರೆ
ತಟ್ಟನೆ ಎಲ್ಲ ಪುಟ್ಟವೂ ದುಬಾರಿ, ದುರ್ಲಭ
ನಾಲಿಗೆಯೊಣಗಿದಾಗ ನೀರ ಬಯಕೆ

ವೈದ್ಯ ದಾದಿಯರು ಅನಗತ್ಯ ಮುಟ್ಟಿದರೆಂಬ
ದೂರಿಲ್ಲ-ಮುಟ್ಟುವುದೇ ಇಲ್ಲ ಎಂಬ ಬೇಸರಿಕೆ
ಮುಖ ಮುಚ್ಚಿ ತಮ್ಮ ಪರಿಚಯ ಬಚ್ಚಿಟ್ಟರೆಂಬ
ಶಂಕೆಯಿಲ್ಲ-ಖಾಲಿ ದೂರು ಪೆಟ್ಟಿಗೆ

ಆ ಒಂದು ಸ್ಪರ್ಷ, ಬೆಚ್ಚಗಿನದೊಂದು ಅಪ್ಪುಗೆ
ಹತ್ತಿರವೆಂಬ ಆತ್ಮೀಯತೆಯ ಸೊಗಡು
ಎಲ್ಲ ಟ್ರಂಕಿನಲಿ ತುಂಬಿ ಹೊತ್ತೊಯ್ದ ಜೀವಗಳು
ಅಣಕಿಸುತ್ತವೆ ಅವರ ಖಾಲಿ ಕೋಣೆಗಳು

ಮುಟ್ಟಿ, ಮಾತಾಡಿಸಿ, ಸೇರಿ ,ಮುದ್ದಾಡಿ
ಸೈರಿಸಿ, ಸಂತೈಸಿ, ಸಂತೋಷಿಸಿ
ಮನುಷ್ಯರಾಗಿದ್ದವರಿಗೂ ಇದೀಗ
ಕೊರೋನಾ ಮಾರಿಯ ಲಕ್ಷ್ಮಣರೇಖೆ

ಬೀಗುತ್ತ ಬದುಕನಾಳಿದ ಸಮಯಕ್ಕು
ಜೀವನದ ಅವಿರತ ತುಡಿತಗಳಿಗೂ
ಕೋವಿಡ್ ಮಾರಿಯ ರುದ್ರ ನರ್ತನದ ನಡುವೆ
ಲಾಕ್ ಡೌನ್ ಎಂಬ ಬೀಗ ಮುದ್ರಿಕೆ.

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

6 Comments

  1. ಅಂಜನಾ

    ಚೆನ್ನಾಗಿದೆ

    Reply
    • ಡಾ.ಪ್ರೇಮಲತ

      ಧನ್ಯವಾದಗಳು ಅಂಜನಾ ಗಾಂವ್ಕರ್ .

      Reply
  2. ರಾಜು ಭಟ್ಟ

    ಚೆನ್ನಾಗಿದೆ.

    Reply
    • ಡಾ.ಪ್ರೇಮಲತ

      ಧನ್ಯವಾದಗಳು ರಾಜು.

      Reply
  3. T V N Murthy

    ಸುಂದರ ಚಿಂತನೆಗೆಳಿಂದ ಮಾತ್ರ ಸುಂದರ ಬರಹ ಸಾಧ್ಯ. ಸಮಯಕ್ಕೆ ತಕ್ಕ ಕವನ. ನನಗೆ ಅರ್ಥವಾಗದಿರುವ ಸಂಗತಿ ಎಂದರೆ ಅನುಬವಿದರಿಗಿಂತಾ ಉತ್ತಮವಾಗಿ ಕಲ್ಪಸಿ ಸತ್ಯವನ್ನೇ ಬರೆಯಲು ಹೇಗೆ ಸಾಧ್ಯವಾಯಿತು ಎಂಬುದು?

    Reply
  4. Premalatha B

    ಓದಿ ಅಭಿಮಾನದಿಂದ ಕಮೆಂಟಿಸಿದ್ದಕ್ಕೆ ಮೂರ್ತಿಯವರಿಗೆ ಧನ್ಯವಾದಗಳು.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ