Advertisement
ನಾ ದಿವಾಕರ್ ಬರೆದ ಈ ದಿನದ ಕವಿತೆ

ನಾ ದಿವಾಕರ್ ಬರೆದ ಈ ದಿನದ ಕವಿತೆ

ಕರುಳ ಬಳ್ಳಿಯ ನಾದ

ನೀರೆರೆದ ಬಳ್ಳಿ
ಇಬ್ಬನಿಯ ಮಾಲೆ ತೊಟ್ಟು
ನಳನಳಿಸುವಾಗ
ಹನಿಯ ಸಾಲುಗಳಲೊಂದು
ಕಂಬನಿ ಕೈ ಬೀಸಿ ಕರೆಯುತ್ತದೆ;
ನನ್ನದೇ ಬಿಂಬ
ಸ್ಪರ್ಶಿಸಲನುವಾದಾಗ
ಕೆಂಡದುಂಡೆಯ ಭಾವ
ಇಬ್ಬನಿಯೊಳಗಿನ ಕಾವು
ಭಾವ-ಅನುಭಾವದ ಸಾವು!

ಹಸಿರೆಲೆಯಂಚಿನ ಸೊಗಸು
ತೊಟ್ಟಿಲೊಳಗಿನ ಕೂಸು
ಏನೆಲ್ಲಾ ಕನಸು
ನೆಲ ಮುತ್ತಿಕ್ಕಿದಾಗ
ದರ್ಪಣಕ್ಕೆನಿತು ದರ್ಪ;
ಛಿದ್ರ ತುಣುಕುಗಳಲಿ ಕಂಡ
ಬಿತ್ತ ಬಿತ್ತವನದಲ್ಲ
ಹನಿಗಳಲಿ ಕಂಡ ಚಿತ್ತ
ಹೆತ್ತವನದೂ ಅಲ್ಲ
ನಿಗೂಢ!

ಬೇರು ಪರಾಗಗಳ ನಡುವೆ
ಎಷ್ಟೊಂದು ಅಂತರ
ಉದುರಿದ ಪಕಳೆ
ತರಗೆಲೆಯನಪ್ಪಿದಾಗ
ಎದೆಬಡಿತದ ಸದ್ದು
ಮಣ್ಣ ಕಣದಲಿ ಲೀನ;
ಜೀವದೊಳಗಿನ ಭಾವ
ಸೆಲೆ ನೆಲೆಯ ಮರೆತು
ಬಲೆಯೊಳಡಗಿದಾಗ
ಕಣ್ಣಂಚಿನ ಹನಿಗೆ
ಎಲ್ಲವೂ ಶೂನ್ಯ!

ನಿತ್ಯ ಸಾಗದು ಭಾವ
ಮಿಥ್ಯೆ ಕಾಣದು ಜೀವ
ಸುತ್ತಣ ಬೇಲಿಗಳನಟ್ಟಿ
ಭವ್ಯತೆಗೊಲಿಯುವಾಗ
ನೆಲ ತೊರೆವ ಕಾತರ;
ಕರುಳ ಸವಿಗಾನವೋ
ಕೊರಳ ದುಮ್ಮಾನವೋ
ಎದೆಯಾಳದ ನೋವಿಗೆ
ನೆನಪುಗಳೇ ಸುನಾದ!

ಹೆಜ್ಜೆ ಗುರುತುಗಳೊಡನೆ
ಕಿರುಬೆರಳಿನ ಸ್ಪರ್ಶ
ಎತ್ತ ಸಾಗಿತೋ ಮನಸು
ಮತ್ತೊಂದು ಕೊಂಡಿ;
ನೆನಪುಗಳ ಸರಪಣಿಯೋ
ಕರುಳ ಸಂಕೋಲೆಯೋ
ಇಂಪು ಸೂಸುವ ಕೊರಳಲಿ
ಕಂಬನಿ ಕುಳಿತಾಗ
ಹಸಿರ ನಡುವಿನ ಗಾನ
ಚರಮವಾಕ್ಯ!

 

ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.
ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ.
ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ.  
ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ