Advertisement
ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ

ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ

ಹೆಜ್ಜೆಗಳು

ನಿನ್ನೆ ನಡೆದ ಹೆಜ್ಜೆಗಳ ಗುರುತು
ಹಿಡಿಯಲು ಮತ್ತೆ ಮರಳುವಾಸೆ
ಅಳಿಸಿದ ಅಲೆಗಳಲ್ಲಿ ಅದನ್ನು
ಹುಡುಕುವದು ಹೇಗೆ?

ಹೆಜ್ಜೆಗಳ ದಾರಿ ಎಳೆದ ಮೋಡಗಳೆಲ್ಲ
ಮಳೆಯಾಗಿ ಮರೆಯಾಗಿವೆ
ಸುಡುವ ಬಿಸಿಲಿನ ಸೂರ್ಯ
ಸರಿದಂತೆ ಹೊರಳುವ ನೆರಳಿನ ದಿಕ್ಕು,
ನಕ್ಷತ್ರಗಳ ಬೆಳಕು ಹೇಳುವ ದಾರಿ
ತಿಳಿಯುವುದು ಹೇಗೆ?

ಎಷ್ಟು ಸದ್ದಿನ ಹೆಜ್ಜೆಗಳು!
ಒಂದು ಊರುವದರಲ್ಲಿ ಮತ್ತೊಂದು
ಬೇಗ! ಬೇಗ! ಬೇಗ!
ಮುಂದೆ ಹೋದಷ್ಟೂ ಅವಸರ,
ದಾರಿಯ ಹೂಗಳ ಪರಿಮಳವೂ ತಿಳಿಯದಷ್ಟು.
ಬೇಲಿಯ ಮುಳ್ಳುಗಳ ಕಲೆ ಮೈತುಂಬಾ.

ಯಾವ ಹೆಜ್ಜೆಯ ಜಾಡು, ಯಾವ ನೆರಳಿನ ಛಾಯೆ?
ನಿನ್ನೆಯೋ? ನಾಳೆಯೋ?
ನಂಬಿಕೆಯ ದೀವಿಗೆಯೊ? ಕಲ್ಪನೆಯ ಮಾಯೆಯೋ?
ಎಲ್ಲ ಬೆಳಕೀಗ ಶೂನ್ಯ; ಮನಸು ಮುಳುಗಿದ ಗುಡ್ಡೆ.
ಹೊಸ ಉಸಿರಿನ ಹುಡುಕಾಟ
ನೀರ ದಾಟಿಸುವ ಸೇತುವೆಯ ಕಟ್ಟ ಬೇಕಿನ್ನೂ

ಕಾಲಿನಡಿ ಸರಿದ ನೀರು, ತೊಯ್ದ ಮಣ್ಣಿನ ಸ್ಪರ್ಶ
ಮೈ ಸೋಕಿದ ತಂಗಾಳಿ, ಕಣ್ತೆರೆಯೆ ಆಗಸದ ಕೆಂಪು
ಸುತ್ತ ತರತರದ ಕಂಪಿನ ಹೂಗಳು
ಉಸಿರೆಳೆದು ನಿಂತ ಮನದೊಳಗೆ ಹೊಸ ರೆಕ್ಕೆಗಳು
ಕಾಲು ಮುಟ್ಟಿದ ಅಲೆ ಕರೆದು ಹೇಳಿತು:
ಈ ಹೆಜ್ಜೆಯ ಗುರುತು ನೀನೆ ಇಟ್ಟುಕೋ.

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. srinivasa mahendrakar

    ಇಟ್ಟ ಹೆಜ್ಜೆ ಮರಳಿ ಸಿಗದಿದ್ದರೂ, ನಡೆದ ದಾರಿ ಮರೆಯುವಷ್ಟು ಅವಸರ ಬೇಡ ಎಂಬ ಸಾರಾಂಶ ವನ್ನು ಕವನದಲ್ಲಿ ಸೊಗಸಾಗಿ ಹಿಡಿದಿರುವಿರಿ ಮುರಲಿ ಅವರೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ