Advertisement
ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

ಪ್ರತಿಫಲನ

ಅಮ್ಮನಂಥ ಅಗಾಧ ಹೆಮ್ಮರ
ಸುಲಭಕ್ಕೆ ಸೋತು ಬಗ್ಗುವುದಲ್ಲ
ಆಕ್ರಮಣ, ಅತಿಕ್ರಮಣ ಇನ್ನೇನು ಮುಗಿಲು ಮುಟ್ಟಲಿದೆ
ಕೊರೆದು, ಬಗೆದು ವಿಕಾರಗೊಂಡಿರುವ ಅದರ ದೇಹ ಛಿದ್ರ ಛಿದ್ರವಾಗಲಿದೆ
ಅಲ್ಲಿ ಹುಲ್ಲು ಸಹ ಹುಟ್ಟಲಾರದು

ಹೂ ಹಣ್ಣುಗಳೆಲ್ಲ ಕಾಲಕ್ಕೆ ಕಾದು ಮಾಗುವಂತಿಲ್ಲ ಈಗ
ಇವರೋ, ಅವರೋ..  ಯಾರು ಬಂದಾಗಲೂ ಫಲ ಕೊಡಬೇಕು
ಮದ್ದುಗಳಿವೆ ಅವರಲ್ಲಿ.. ಇಲ್ಲವೆನ್ನಲಾಗದು
ಕಾಲ ಮೂಡುವ ಮುನ್ನವೇ ದೇಹ ಮಾಗಲಿದೆ
ಹೆತ್ತ ನೋವಾರುವ ಮುನ್ನವೇ, ಮತ್ತೆ ಗರ್ಭ ಹೊತ್ತು ನಿಲ್ಲಬೇಕು.
ಹಡೆಹಡೆದು ಒಡಲ ಚೀಲವೇ
ಹರಿದು ಹೋಗುವವರೆಗೂ ಹೆರಬೇಕು

ನಿಶ್ಯಬ್ಧವನ್ನು ಜೀವಂತ ಸುಟ್ಟ ಇಲ್ಲಿನ
ಕೋಗಿಲೆಗಳ ಹಾಡು ಇತಿಹಾಸ ಸೇರಲಿದೆ
ಹಕ್ಕಿಗಳ ಗೂಡು ಹರಾಜಿಗಿಡಲಾಗಿದೆ
ಹೂವು ದುಂಬಿಗಿಲ್ಲ: ಹಣ್ಣು ಹಕ್ಕಿಗಲ್ಲ

 

 

 

 

ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ

ಎದೆ ಬಗೆಯುವಾಗ ಸಿಕ್ಕ ಬೇರುಗಳಿಗೆ ಮರಣ ಪ್ರಾಪ್ತಿ
‘ಚೀ ಚೀ.. ಎಷ್ಟು ಬಿಸ್ಲು..
ಮಳಿಗಾಲದಾಗ ಹನಿ ನೀರೂ ಸಿಗವಲ್ದು..’
ಕಾಡು ಕಡಿದು ಕಾರು ಕೊಂಡಾತನೊಬ್ಬ
ನಡು ಬೀದಿಯಲ್ಲಿ ನಿಂತು ಅರಚುತ್ತಿದ್ದಾನೆ
ಗಂಜಿ ಹಾಕಿದ ಅವನ ಬಿಳಿ ಬಟ್ಟೆಗೆ
ಒಣಭೂಮಿಯ ಮೇಲ್ಮಣ್ಣು ಮೋಹಕಗೊಂಡು ಮುತ್ತಿಕ್ಕುತ್ತಿದೆ

ವಜ್ರದ್ಹರಳಿನ ಗಡಿಯಾರದಲ್ಲಿ ಸಮಯ ಹೇಗಿದೆ?
ದಾರಿ ಹೋಕನೊಬ್ಬ ಅವನನ್ನು ಪ್ರಶ್ನಿಸಿದ್ದಾನೆ
ಮತ್ತು ಉತ್ತರಕ್ಕೂ ಕಾಯದೇ ಮುನ್ನಡೆದಿದ್ದಾನೆ
ಠಾರಿಲ್ಲದ ಅವನೂರ ಹಾದಿಯಲ್ಲಿ ಕೆಟ್ಟು ನಿಂತ ಕಾರು
ತೆಗ್ಗು ದಿಣ್ಣೆಗಳಿಗಂಜಿ ಮಿಕಿಮಿಕಿ ನೋಡುತ್ತಿದೆ..

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

1 Comment

  1. sHESHAGRIJODIDAR

    ಮದ್ದುಗಳಿವೆ ಅವರಲ್ಲಿ.. ಇಲ್ಲವೆನ್ನಲಾಗದು
    ಕಾಲ ಮೂಡುವ ಮುನ್ನವೇ ದೇಹ ಮಾಗಲಿದೆ
    ಹೆತ್ತ ನೋವಾರುವ ಮುನ್ನವೇ, ಮತ್ತೆ ಗರ್ಭ ಹೊತ್ತು ನಿಲ್ಲಬೇಕು.
    ಹಡೆಹಡೆದು ಒಡಲ ಚೀಲವೇ
    ಹರಿದು ಹೋಗುವವರೆಗೂ ಹೆರಬೇಕು……
    Biotechnology and its application to get required colour, fragrance and even the structure….fruits, vegetables has made all the natural products too toxic…of which we are ignorant…….Human greed’s expression is progress…but we seldom realize…it is suicidal and biomass destructive…Matter of time….Nice…Roopa…we need this kind of poems….to be aware of the degrading environment…specially the urban…mass….nice..

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ