Advertisement
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

ನಾನು ಶೂನ್ಯವಾಗಬೇಕು

ನಾನು ಶೂನ್ಯವಾಗಬೇಕು
ಒಂದರಿಂದ ಒಂಭತ್ತರವರೆಗಿನ
‘ಅಂಕೆ’ಗಳಿಗೊಳಗಾಗದೆ
ನಾನು ನಾನಾಗಿಯೇ ಬಾಳಬೇಕು

ವಿಭಾಗಿಸಿ ಒಡೆದುಹಾಕುವ ವ್ಯಾಸಕ್ಕೆ ಬೆದರದೆ
ತ್ರಿಜ್ಯದ ಸಂಪರ್ಕವನ್ನು ಅತಿಯಾಗಿ ಹಚ್ಚಿಕೊಳ್ಳದೆ-
ಹಾಗೆಂದು ದೂರವೂ ಉಳಿಯದೆ
ಸುತ್ತ ಆವರಿಸಿ ನಿಂತ ಪರಿಧಿಗಳೆಲ್ಲವನ್ನೂ ಮೀರಿದ
ನಗುಮುಖದ ವೃತ್ತವಾಗಬೇಕು

ಸಂತಸದ ಕೂಟದಲ್ಲಿ ಕೂಡಿ ಒಂದಾಗಿ
ದುಃಖವನ್ನು ಕಳೆದು ಮತ್ತಷ್ಟು ಕಳೆದುಕೊಳ್ಳುತ್ತಾ
ಗುಣಾಕಾರ(ಗುಣ ಆಕಾರ)ದ ದ್ವಂದ್ವದಲ್ಲಿ
ತನ್ನತನವನ್ನು ಬಿಡದೆ
ಭಾ(ಬಾ)ಗಿಸುವವರ ಅಧಿಕಪ್ರಸಂಗಗಳಿಗೆ ತಲೆಕೆಡಿಸಿಕೊಳ್ಳದೆ
ಒಂದರೊಡನೆ ಇನ್ನೊಂದಾಗದೆ
ಸ್ವಂತಿಕೆಯ ಬದುಕನ್ನು ನಡೆಸಬೇಕು
ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು

ಎಡಕ್ಕೆ ಬಂದು ಕುಳಿತವರನ್ನು ಹಿಗ್ಗಿಸದ
ಬಲಕ್ಕೆ ಬಂದು ಕುಳಿತವರ ಜೊತೆ ಸೇರದ
ಮನಃಸ್ಥಿತಿಯನ್ನು ನಾನು ಕಳೆದುಕೊಳ್ಳಬೇಕು
ಎಡ- ಬಲಗಳ ಗೊಡವೆಗೆಡೆಗೊಡದ
ನಿಮ್ನೋನ್ನತರಹಿತ ಶೂನ್ಯ ನಾನಾಗಬೇಕು

ಅದೆಂತೋ ದಕ್ಕಿಸಿಕೊಂಡ ‘ಒಂದ’ನ್ನು
ಅದರ ಮುಂದಣ ಮೆಟ್ಟಿಲುಗಳನ್ನು
ಒಂದೊಂದಾಗಿ ಹತ್ತುತ್ತಾ ಹತ್ತಾಗಿ
ಶತಕ ಬಾರಿಸಿ
ಸಹಸ್ರಾರ ತಲುಪಬೇಕು
‘ಸಾವಿರದ’ ಸಂಖ್ಯೆ ನಾನಾಗಬೇಕು

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ