Advertisement
ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

ವೈಶಾಲಿ ಹೆಗಡೆ ಹನಿಸಿದ ಒಂದಿಷ್ಟು ಮಳೆ ಕವಿತೆಗಳು

1.
ಹಾರಿಹೋಗಬೇಕಿತ್ತು ನಾವು
ಅಲ್ಲೆಲ್ಲೋ ಮಿಂಚಿ ಮರೆಯಾದ ಸಿಡಿಲಾಚೆಗಿನ ಭೂಮಿಗೆ
ಕಡಲಾಚೆಗಿನ ಕ್ಷತಿಜದಂಚಿಗೆ
ಮಡಿಲಾಚೆಗಿನ ತುಡಿತದೂರಿಗೆ
ಆದರೀಗ
ಅಲ್ಲಿ ಜೋರು ಮಳೆಯಂತೆ
ಎಲ್ಲ ಕೊಚ್ಚಿಹೋಗಿದೆಯೆಂತೆ
ಥೇಟ್ ನನ್ನೊಳಗಿನ ಹಾಗೆ

2.
ಸುರಿವ ಮಳೆನೀರ ಜಲಪಾತಕ್ಕೆಲ್ಲ ಹೆಸರಿಡುವರೇ
ಒಳಗ ಬೇಗುದಿಗೆಲ್ಲ ಹೆಸರಿಡಲಾಗುವುದಿಲ್ಲ
ಬರೀ ಕುದಿಯುತ್ತದೆ
ಬತ್ತುತ್ತದೆ
ಮತ್ತೆ ಮಳೆ ಅದದೇ  ಮಳೆ
ಸುರುವಿಲ್ಲ ಕೊನೆಯಿಲ್ಲದಾವರ್ತದಲ್ಲಿ
ಧೋ ಎಂದು ಧುಮುಕಿಬಿಡಬೇಕು
ಮತ್ತೆ ಮಳೆಯಾಗುವ ಮುನ್ನ

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

 

 

 

 

 

 

 

 

3.
ಒದ್ದೆರೆಕ್ಕೆಯ ಪುಕ್ಕ ಬಿಡಿಸಹೋದರೆ ಒಳಗೆಲ್ಲ ಮಳೆ ಹೊಯ್ಯುತ್ತದೆ
ಎಳೆಎಳೆಯಾಗಿ  ಬಿಚ್ಚಿ ಹರಡಿ ಕೂತಿರುವೆ
ಉಳಿದ ರೆಕ್ಕೆಯ ಪುಕ್ಕದ ಗರಿಯ
ಉಣ್ಣೆರೆಕ್ಕೆಯ ಹನಿ ಆರುವುದಿಲ್ಲ
ನಾ ಹರವುವುದ ಬಿಡುವುದಿಲ್ಲ

4.
ತಿಂಗಳಿಡೀ ಹೊಯ್ದ ಹುಯಿಲಿಗೆ ಹಬ್ಬಿನಿಂತ
ಹೆಬ್ಬಂಡೆಯೆಡೆಯ ಬಳ್ಳಿ
ಹೊಕ್ಕುಳ ಹರಿದು ಹೊರನಡೆದಂತೆ
ನಾಜೂಕು ನಡೆದೇಬಿಟ್ಟೆ
ಅದಕ್ಕಿನ್ನು  ಹೂ ಬಿಡುವುದಿಲ್ಲ ಎಷ್ಟು ಮಳೆ ಹೊಯ್ದರೂ

5.
ಬಯಲಲ್ಲಿ  ಒದ್ದೆಯಾಗುವುದೇ ಒಳಿತು
ಬಿಸಿಲು ಬಂದಲ್ಲೆಲ್ಲ ಬಾನು ಕಂಡೀತು
ಮಳೆನಿಂತರೂ ಮರದಡಿಗೆ ಮಳೆ ನಿಲ್ಲುವುದಿಲ್ಲ

6.
ಬಾ ಅಲ್ಲೆಲ್ಲೋ ಹನಿಸುತ್ತಿದೆ ನೋಡು
ಹನಿ ಕಟ್ಟುವಾ  ಹಗುರಾಗುವ
ಹನಿವ ತನುವಿಗೆಲ್ಲಿ ಮೋಡದ ಹಂಗು
ಕೆನ್ನೆಗೂ ಬೆನ್ನಿಗೂ  ನಡುವಿನ ಅಂತರದ ಲೆಕ್ಕ ಕೇಳಿದರೆ  ಹೇಳಬಲ್ಲೆಯಾ
ನನ್ನ ಹುಚ್ಚುತನದ ಭಾಗವಾಗುವಷ್ಟು ಹುಚ್ಚುಪ್ರೀತಿ ನಿನಗಿರಲಿಲ್ಲ ಬಿಡು ಹುಡುಗಾ

About The Author

ವೈಶಾಲಿ ಹೆಗಡೆ

ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ