Advertisement
ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ

ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ

ಗೀರು ಬಿದ್ದ ಅದೃಶ್ಯ ಕೈಗಳು

ಮೊದಲು
ಗೀರುಬಿದ್ದ ಅದೃಶ್ಯ ಕೈಗಳ ಅವಕೃಪೆಗೆ ಒಳಗಾಗು
ಬೆವತು ಸುಕ್ಕಾದ ಮೈಯನ್ನು ಹಿಡಿಯಾಗಿಸಿ ನಿಂತುಬಿಡು
ಆದರೆ ಸುಮ್ಮನೆ ನಿಲ್ಲಬಾರದು
ಅಣಿಯಾಗಿರಬೇಕು
ನಂತರ
ಗೀರುಬಿದ್ದ ಅದೇ ಅದೃಶ್ಯ ಕೈಗಳು
ಗಡುಸು ನೀರಿನೊಳಗೆ ಕುತ್ತಿಗೆ ಹಿಡಿದು ಮುಳುಗಿಸುತ್ತವೆ
ನಿನಗೆ ಉಸಿರುಗಟ್ಟಬಹುದು
ಎದೆಯೊಡೆದು ಹೋಳಾಗಬಹುದು
ಕಣ್ಣು ಮಸುಕಾಗಿ ಮಬ್ಬಾಗಬಹುದು
ಕುತ್ತಿಗೆಯನ್ನ ಸ್ಪರ್ಶದ ಲವಲೇಶವೂ ಉಳಿಯದಂತೆ ಹಿಸುಕಿದ ತಕ್ಷಣ
ಎಲ್ಲವೂ ಮುಗಿಯಿತು ಎಂದುಕೊಳ್ಳಬೇಡ
ಒಂದಿಷ್ಟೇ ಗಾಳಿ ಸಿಕ್ಕರೂ ನಿಧಾನವಾಗಿ ಉಸಿರೆಳೆದುಕೊಂಡು ಮರಳಿ ತಯಾರಾಗು
ಗೀರು ಬಿದ್ದ ಕೈಗಳು
ಎದುರಿದ್ದ ಶತಮಾನಗಳಷ್ಟು ಹಳೆಯ ಕಲ್ಲುಜೋಪಡಿಗೆ
ಮೇಲಿಂದ ಮೇಲೆ ಹಿಡಿಯಾಗಿಸಿದ ನಿನ್ನ ಮೈಯನ್ನ ಸೆಣೆಯುತ್ತವೆ
ಬಡಿಯುತ್ತವೆ
ಕಡೆಗೆ
ನಿನ್ನ ಒಡಲೊಳಗೆ ಏನೆಂದರೆ ಏನೂ ಉಳಿಯದಂತೆ
ಹಿಂಡಿ ಬರಿದಾಗಿಸುತ್ತವೆ

ನಿನಗೆ ನೋವಾಗಿದ್ದು ನಿಜವಿರಬಹುದು
ಇರಲಿ
ಸುಮ್ಮನೆ ಗೀರುಬಿದ್ದ ಅದೃಶ್ಯ ಕೈಗಳನ್ನು ದೂರುವುದು ಬೇಡ
ನಿನ್ನ ಮೈಯೊಳಗಿನ ಮೂಳೆಗಳು ಲಟಲಟನೆ ಮುರಿಸಿಕೊಂಡಿರಬಹುದು
ಆದರೆ ನೀನು ಒಳಗೇ ಹದಗೊಂಡಿದ್ದು ಸುಳ್ಳಲ್ಲವಲ್ಲ!
ಈಗ ನೀನೇ ನೋಡು
ಮೈಗಂಟಿದ ನೆನಪುಗಳ ಕೊಳೆ ಹೇಗೆ ಹರಿಯುತ್ತಿದೆ

ಮೊದಲು ನೆಪಗಳ ನೀಡುವುದನ್ನು ಬಿಡು
ಎರಡೂ ತುದಿಕಾಣದ ತಂತಿಗೆ ನೇತುಬೀಳುವುದನ್ನು ತಪ್ಪಿಸಬೇಡ
ಎದೆ ಸುಡುವ ಬಿಸಿಲಿದೆ
ಸಾಕೆನ್ನುವಷ್ಟು ಮೈ ಕಾಯಿಸಿಕೋ
ಮಾಸದ ಕೊಳೆಯ ಗುರುತು ಮಾತ್ರ
ಏನೆಂದರೆ ಏನೊಂದು ಉಳಿಯದೆ ಒಣಗಿ ಬರಿದಾಗಿಬಿಡು

ಒಂದೇ ಸಂಜೆಯೊಳಗೆ ಮತ್ತೊಮ್ಮೆ ನೀನು ಶುಭ್ರವಾಗಬಹುದು
ನೋಯಿಸಿದಕ್ಕೆ
ಗೀರುಬಿದ್ದ ಅದೃಶ್ಯ ಕೈಗಳನ್ನ ದೂರಬೇಡ
ಹದಗೊಳಿಸಿದಕ್ಕೆ
ಋಣಿಯಾಗಿರು

ಸಂದೀಪ್ ಈಶಾನ್ಯ  ಮೂಲತ‍ಃ ಮೈಸೂರಿನವರು .
ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದವರು.

ಸುದ್ದಿ ವಾಹಿನಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ. ಆಂಗ್ಲ ಕಾದಂಬರಿಯೊಂದರ ಸಹ ಲೇಖಕರು.ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಇವರಿಗೆ ಸಿನಿಮಾ, ಸಾಹಿತ್ಯ, ಪ್ರವಾಸದಲ್ಲಿ ಆಸಕ್ತಿ.
ಇವರ “ಮೆಟ್ರೋ ರೈಲಿನ ಹುಡುಗಿ” ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ