Advertisement
ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ನೀಲಿ ಫ್ರಾಕಿನ ಪೋರಿ..

ಆ ಪುಟ್ಟ ಪಾದಗಳಿಡುವ
ಕಚಗುಳಿ ಎಣಿಸುವ
ಹಾದಿ,
ಅಂಗಾಲಿನೊಳಗಿನ
ಗೀರುಗಳನು ಕಣ್ಣಿಗೊತ್ತಿಕೊಳ್ಳಲು
ಕಾದ
ಉದ್ದದ ಕಾರಿಡಾರು,
ನೀಲಿ ಬಣ್ಣದ ಫ್ರಾಕು ತೊಟ್ಟ
ಆ ಪೋರಿ,
ಎತ್ತಿಕಟ್ಟಿದ ಎರಡೂ ಜಡೆಗೂ
ನಕ್ಷತ್ರ ಮುಡಿದ
ಆ ಸೊಗಸು..
ಎಲ್ಲವೂ ಗಲಗಲ!

ಹಕ್ಕಿಗಳ ಸಂಗೀತದ ಕಛೇರಿಯಂತಹ
ಒಡ್ಡೋಲಗ
ಮಾತೂ ನಾದದ ಬೆನ್ನು ಹತ್ತಿದ
ಈ ಕ್ಷಣಕೆ
ನನ್ನೊಳಗೊಂದು ದಿವ್ಯ ಮೌನ

ಮೌನದೊಳಗಿನಿಂದ ಎಷ್ಟೊಂದು
ಮಾತು ಕೇಳಿಸುತ್ತಿವೆ
ಎದೆಗೆ ಬಡಿಯುತ್ತಿವೆ ಉಮ್ಮಳಿಕೆಗಳು
ಹಸಿದೊಡಲಿನಿಂದ ಚಿಮ್ಮಿದ ಉಸಿರು
ಗಾಳಿಯೊಂದಿಗೆ ಬೆರೆಯಲು
ಯೋಚಿಸುತ್ತದೆ..

ಬೆನ್ನಿಗೆ ಮಣಭಾರದ ಬೂಟಾಟಿಕೆ
ಹೊರಿಸಿ
ಹಳದಿ ಬಸ್ಸಿಗೆ ತಳ್ಳಿ
ಕೈ ಮೂಳೆ ಮುರಿದುಕೊಂಡವರಂತೆ
ಬೀಸುತ್ತಾ ನಿಂತವರನು;
ಬಸ್ಸಲ್ಲಿ ಬುರ್ರನೆ ಹೋದ
ತನ್ನದೇ ವಯಸ್ಸಿನವರನು
ನೋಡಿ ನೋಡಿ
ಕಣ್ಣಲಿ ರಕ್ತ ಹೆಪ್ಪುಗಟ್ಟಿದೆ..

ಕಾಲ ಕರ್ಮದ ಭಾರವು,
ಅದಕ್ಕಿಂತ ತೂಕದ
ನೋವುಗಳು
ಬ್ಯಾಗಿನ ರೂಪದಲಿ ಅವಳ
ಬೆನ್ನುಹತ್ತಿವೆ..
ತೂತು-ತೂತುಗಳೇ ಇರುವ
ಆ ಬ್ಯಾಗಿನಿಂದ ಒಂದಾದರೂ
ನೋವು,
ಶತಮಾನದ ಕರ್ಮ ಕಾಠಿಣ್ಯ
ಜಾರಿ ಹೋಗದ್ದು
ಎಂತಹ ವಿಪರ್ಯಾಸ!?

ಎಳೆಯ ಕೈಗಳಲಿ ಪಾತ್ರೆ ತಿಕ್ಕಿದ
ಕಪ್ಪು ಬೂದಿ
ಹಾಗೆಯೇ ಇದೆ
ಸಹಸ್ರಮಾನದಿಂದಲೂ ಉಳಿದಿರುವ
ಕೊಳೆಯಂತೆ;
ಅದ ತೊಳೆಯುವ
ಒಂದು ಬೊಗಸೆಯಷ್ಟಾದರೂ
ನೀರು
ಎಲ್ಲಿಯೂ ಸಿಗಲಿಲ್ಲವೇಕೆ?

ಇಂಗ್ಲಿಷ್ ಕಂಗ್ಲಿಷ್ ರ್ಯಾಂಕು
ನೌಕರಿಗಳ ಪರಿವೆ ಇಲ್ಲದೆ
ಈ ಪೋರಿ
ಮುರುಕು ಪೆನ್ಸಿಲ್ನಲ್ಲಿ
ರ ಗ ಸ ದ ಅ ತಿದ್ದುತ್ತಿದ್ದಾಳೆ
ಹಾಡಿದ್ದಾಳೆ
‘ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ
ಇವರು ಯಾರು ಗೊತ್ತೆ?’

ಗಾಂಧೀ ನೀವು ಇರಬೇಕಿತ್ತು
ಈ ಪೋರಿಗಾದರೂ!
ಇಂತಹ ಪೋರಿಗಳಿಗಾದರೂ!

ಕಿಲ ಕಿಲ ನಗುವೊಂದು
ಮುಖದಾಚೆಯಲ್ಲೆಲ್ಲೊ
ಅವಿತುಕೊಳ್ಳುತ್ತದೆ
ಶಾಲೆಯಿಂದ ಹೊರಟ
ಹೆಜ್ಜೆಗಳು ಈಗ ಭಾರ

ನಡೆಯುವ ಈ ಪೋರಿಗೆ
ಕವಲುದಾರಿಯೊಂದು
ಏಕೆ ಎದುರಾಗುವುದಿಲ್ಲ?
ಆ ಇನ್ನೊಂದು ಹಾದಿಯಲಿ
ನಡೆಸಿ
ಈ ಪೋರಿಯರಿಗೆ
ಬೇರೊಂದು ಲೋಕವನು
ಏಕೆ
ತೋರುವುದಿಲ್ಲ!?

ಪ್ರಶ್ನೆಯೂ ಇದೆ
ಉತ್ತರವೂ ಇದೆ..

ಆದರೆ!???

ಹೊಸತಲೆಮಾರಿನ ಕವಿ ಸದಾಶಿವ್ ಸೊರಟೂರು ಹುಟ್ಟಿದ್ದು, ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ.
ಈಗ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ‌ಕಲಿಸುವ ಮೇಷ್ಟ್ರು.
‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ ಕವನ ಸಂಕಲನಗಳು ಹಾಗೂ ಮೂರು ಪ್ರಕಟಿತ ಲೇಖನಗಳ ಕೃತಿಗಳು ಪ್ರಕಟವಾಗಿವೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಹೌದು.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ