Advertisement
ಸ್ಮಿತಾ ಅಮೃತರಾಜ್ ಬರೆದ ದಿನದ ಕವಿತೆ

ಸ್ಮಿತಾ ಅಮೃತರಾಜ್ ಬರೆದ ದಿನದ ಕವಿತೆ

ಕುಕ್ಕರು ಈಗ ಮೊದಲಿನಂತಿಲ್ಲ.

ಶ್‍ಶ್..ಶ್‍ಶ್..ಕುಕ್ಕರು
ಇನ್ನೇನು ಸಿಳ್ಳೆ ಹೊಡೆಯುವ ಹೊತ್ತು
ಚಕ ಚಕನೆ ಮುಂದಿನ ತಯಾರಿಗೆ
ಅಣಿಗೊಳ್ಳಬೇಕು.

ಇಂತಿಷ್ಟೇ ಸಮಯ
ನೀರಿಟ್ಟು ಬೇಕಿರುವುದನ್ನೆಲ್ಲಾ
ಗಮನವಿಟ್ಟು ಹಾಕಿ
ಒಲೆಯ ಮೇಲಿಟ್ಟು ಉರಿ ತಾಕಿಸಿದರಷ್ಟೇ
ಸಾಕು.

ಎದೆಯ ಕಾವು ಹೆಚ್ಚಾಗಿ
ತಕತಕನೆ ಕುಣಿದು
ಕೊತ ಕೊತನೆ ಕುದಿದು
ಪ್ರತಿಭಟನೆಯ ಕೂಗು ಓಣಿ ತಿರುವಿನವರೆಗೂ

ಹಿಂದು ಮುಂದು ಒಂದರ ನಂತರ ಒಂದು
ಕಿಟಕಿ ಕಂಡಿಯ ದಾಟಿ ಹೋಗುತ್ತಿದೆ
ಹಬೆಯ ಘಾಟು.

ಮುಚ್ಚಳ ತೆರೆದರೆ ಎಲ್ಲಾ
ಹದಬೆಂದು ನಿಂತಿದೆ
ಎದೆಯುರಿ ತಣಿದು ತಹಬದಿಗೆ
ಬಂದಂತಿದೆ.

ಅವಗಣನೆಯ ಆವೇಶಕ್ಕೆ
ಕರೆ ಕರೆದು ಕೂಗಿದ್ದು
ಉಪಸ್ಥಿತಿಯ ಅವಾಗಾಹನೆಗೆ ತಂದು
ಆರಿ ತಣ್ಣಗಾದದ್ದು.

ಇತ್ತೀಚೆಗೆ ಕುಕ್ಕರಿಗೆ ಯಾಕೋ
ಮೊದಲಿನ ಹುರುಪಿಲ್ಲ.
ಸಿಳ್ಳೆ ಹೊಡೆಯುವುದೂ ಇಲ್ಲ
ಹಬೆ ಕಾರುವುದೂ ಇಲ್ಲ
ಕರ್ತವ್ಯದಲ್ಲೇನು ಎಳ್ಳಷ್ಟು ಲೋಪವಿಲ್ಲ.

ಶ್‍ಶ್..ಅಷ್ಟೆ ಮೆಲುದನಿಯ ನಿಟ್ಟುಸಿರು
ವೃಥಾ ಕೂಗು ವ್ಯರ್ಥ
ಹೊಳೆದಂತಿದೆ ಹೊಸ ಅರ್ಥ.

ಯೋಚಿಸುತ್ತಿದ್ದೇನೆ..
ಒಂದು ಬಾರಿ ರಿಪೇರಿ ಮಾಡಿಸಿ
ನೋಡಲೇ?
ಇಲ್ಲವೇ ಬದಲಾಯಿಸಿ ಬಿಡಲೇ?

ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆಯ ಬಳಿಯವರು.
ಅಡುಗೆ, ಕೃಷಿ ಮತ್ತು ಕವಿತೆ ಇವರ ಆಸಕ್ತಿಯ ವಿಷಯಗಳು.
‘ತುಟಿಯಂಚಲಿ ಉಲಿದ ಕವಿತೆಗಳು’ ಹಾಗೂ ‘ಕಾಲ ಕಾಯುವುದಿಲ್ಲ’ ಇವರ ಕವನ ಸಂಕಲನಗಳು.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ