Advertisement
ಅನುಪಮಾ ಪ್ರಸಾದ್ ಬರೆದ ದಿನದ ಕವಿತೆ

ಅನುಪಮಾ ಪ್ರಸಾದ್ ಬರೆದ ದಿನದ ಕವಿತೆ

ಕಾಡು ಕಣಿವೆಯ ಮುಗಿಯದ ಹಾಡು
ಕಾಡು ಕಣಿವೆಯೊಳಗಿಂದ ಸೂರ್ಯೆ
ಮೈ ಮುರಿದು ಮೇಲೇಳುವಾಗಲೇ
ಅವಳೊಡಲಿಂದಲೇ ಹೊರಟಂತೆ
ಸುಳಿ ಸುಳಿಯಾಗಿ ಗಾಳಿ ಮೇಲೇರುತ್ತದೆ
ಏರೇರುತ್ತ
ಗುಡ್ಡ ಗುಡ್ಡಗಳನೇ ತಟ್ಟಾಡುತ್ತ
ತುಂಡು ಮೋಡಗಳ ನೇವರಿಸುತ್ತ
ಸಾಲು ಪರ್ವತಗಳೆದೆ ಕಡೆಯುತ್ತ
ಸಂಜೆಯೇರುತಿರೆ ಭರ್ರೋ ಘರ್ಜಿಸುತ್ತ
ಸೀದಾ ಎದೆಯೊಳಗೆ ನುಗ್ಗಿ ಕುಳಿತುಬಿಡುತ್ತದೆ
ಬೆನ್ನ ಮೂಟೆ ಹೊತ್ತು ಊರ ಬಾಗಿಲು ದಾಟಿ
ಹಸಿ ನೆಲಕ್ಕೆ ಅಂಗಾಲೊತ್ತಿ
ಬೆರಳ ಮೂಲೆಮುಡುಕುಗಳ ನೆಲಕಂಟಿಸಿ
ಗಿರಿ ಕಂದರಗಳಲಿ ಕಣ್ಣು ನೆಟ್ಟು ಉಸ್ತಾದ್ ಖಾನನ
ಸಾರಂಗಿ ತಂತಿ ಮ್ಯಾಲ ಕಮಾನು ನಡೆದಂಗೆ ನಡೆಯುತ್ತ
ಸಾಗುವ ಹಸಿ ಮನಸಿನ ಜನರೆದೆಯೊಳಗೆ
ಗರಿ ಬಿಚ್ಚಿದ ನವಿಲು ಕುಣಿತ ಕೆನೆತ ಮೊರೆತ
ಕೊನೆಯಿರದ ವಿರಹದ ಕಂಪಿತ ಸವೆತ
ಕಣಿವೆಯಿಂದೇಳುವ ಸೂರ‍್ಯಳ ನಡೆಯೆಂದರೆ ಹೆಜ್ಜೆ ಮೇಲೊಂದ್ಹೆಜ್ಜೆ
ಅವಳ ಒಂದೊಂದು ನಡೆಗೂ ಕಾದು ಕಾವೇರುವ ನೆಲ ಬಾನಿಗೆ
ಗಾಯಕುದುರಿಸಿದ ಉಪ್ಪಂತೆ
ಬಣ್ಣದೋಕುಳಿಯ ಮಳೆ ಹನಿಸಿ
ಪರ್ವತಗಳ ದಾಟಿ ದಾಟಿ ಸಟಕ್ಕನೆ ಕಣ್ಣು ಮಿಟುಕಿಸಿ
ಗಿರಿ ಕಂದರದ ಮಕ್ಕಳಿಗೆ ಕಪ್ಪು ಚಾದರ ಹೊದೆಸಿ
ಒಳಗೆ ಬೀಸುಗಾಳಿಯ ತೂರಿಸಿ
ಕಣ್ಣಾಚೆಯ ಕಣಿವೆಯೊಳಗೆ
ಸಳಕ್ಕನೆ ಇಳಿದು ಹೋಗುತ್ತಾಳೆ ಮಾಯಗಾತಿ ಬಂಗಾರದ ಜಿಂಕೆ
ಮತ್ತೆ ಮೈ ಮುರಿದು ಮೇಲೇಳಲು.

 

ಅನುಪಮಾ ಪ್ರಸಾದ್ ಹೆಸರಾಂತ ಕಥೆಗಾರ್ತಿ ಮತ್ತು ಕವಯಿತ್ರಿ.
ಮೂಲತಃ ಉತ್ತರ ಕನ್ನಡದ ಶಿರಸಿಯವರು.ಈಗ ಕಾಸರಗೋಡಿನ ನೀರ್ಚಾಲಿನಲ್ಲಿ ವಾಸ.
ಜೋಗತಿ ಜೋಳಿಗೆ ಇವರ ಇತ್ತೀಚಿನ ಕಥಾ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ