Advertisement
ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ

ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ

ಗಂಧವತಿ

ಸುಮ್ಮನೇ ಪದ್ಮಾಸನದಲ್ಲಿ ಕೂತು ಧ್ಯಾನಸ್ಥನಂತೆ ನಟಿಸುವಾಗಲೂ
ಕಳೆದ ಇರುಳುಗಳಲ್ಲಿ ದೇಹದಿಂದ ನೀನು ಗುಟ್ಟಾಗಿ ಹೊಮ್ಮಿಸಿದ ಗಂಧದ ಘಮಲು
ನೀಲಿದೇಹಿಯ ಉಬ್ಬುಕೊರಳಿನ ಉರಗದಂತೆ
ಮರಳಿ ನನ್ನನ್ನು ಬಿಗಿದುಕೊಳ್ಳುತ್ತದೆ

ಸಹಸ್ರ ವರ್ಷಗಳಿಗೊಮ್ಮೆ ಮಿನುಗಿ
ಒಂದಿಡಿಯಷ್ಟು ಬೆಳಕನ್ನು ಮಾತ್ರ ಬಯಲಿಗೆಸೆವ
ಅಸ್ಪೃಶ್ಯ ನಕ್ಷತ್ರದ
ಬೆಳಕಿಗೆ ಹೆದರಿ ಅಗಳಿ ಜಡಿದುಕೊಂಡವರ
ಮನೆಯ ಮೂಲೆಯಲ್ಲಿ ಅತ್ತಿತ್ತ ಓಲಾಡುತ್ತಿರುವ
ಒಂಟಿ ದೀಪದ ಒಡಲಿಗೆ ಎಣ್ಣೆ ಸುರಿದವಳು
ಈಗ
ನೆರಳೂ ಸೋಕಿಸದಂತೆ
ಊರ ಹೊರಗೆ ಒಬ್ಬಳೇ ಗೇಣು ಕೆತ್ತುತ್ತ ಒಡಲ ತುಂಬಿಕೊಳ್ಳಲು ಅವಸರಿಸುತಾಳೆ

ಅಕಾಲಿಕ ವಸಂತದಂತೆ ಮುನಿಸು ಸರಿಸಿದ
ಅವನ ಎರಡೂ ಕಣ್ಣುಗಳಲ್ಲಿನ
ಸಿಟ್ಟು ಸಣ್ಣ ಒಲವಿನ ಎದುರು
ಕೈ ಮಿಲಾಯಿಸಲಾರದೆ ನೆಲಕ್ಕಪ್ಪಳಿಸಿ ದೊಪ್ಪೆಂದು‌ ಬಿದ್ದು ಮೈಗಂಟಿದ ಧೂಳು
ಕೊಡವಿಕೊಳ್ಳುತ್ತಲೆ ಚದುರುತ್ತದೆ

ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಮೌನ

ಊರ ತೋಟದ ಹೂವು ಕಂಪು ಕಳೆದುಕೊಂಡು
ತನ್ನಸ್ತಿತ್ವದ ಗಾಯದ ಒಸರಿಗೆ
ನೋಯುತ್ತಿರುವ ಹೊತ್ತಿಗೇ
ತುಂಬಿಕೊಂಡ ಘಮಲನ್ನ
ಕದ್ದು ಕಣ್ಣರಳಿಸಿ
ಒಂದಿಷ್ಟೇ ಹಂಚಿಕೊಳ್ಳುತ್ತಾಳೆ

ಮಗ್ಗುಲಿಗೆ ಹೊರಳಿ
ಕೊರಳು ಪಸೆ ಒಣಗುವ ಮೊದಲೇ
ಅಷ್ಟೊಂದು ರೂಪದ ಗಂಧವತಿಯ
ಪಾಪಕಾರ್ಯದಲ್ಲಿ ಅರಿವಿಲ್ಲದೆ ಅನುಮತಿ ಇಲ್ಲದೇ ನಾನೂ ಸಮಾನವಾಗಿ ಭಾಗಿಯಾಗಿಹೋಗುತ್ತೇನೆ

ಸಂದೀಪ್  ಮೂಲತ‍ಃ ಮೈಸೂರಿನವರು .
ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದವರು.

ಸುದ್ದಿ ವಾಹಿನಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ. ಆಂಗ್ಲ ಕಾದಂಬರಿಯೊಂದರ ಸಹ ಲೇಖಕರು.ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಇವರಿಗೆ ಸಿನಿಮಾ, ಸಾಹಿತ್ಯ, ಪ್ರವಾಸದಲ್ಲಿ ಆಸಕ್ತಿ.
ಇವರ “ಮೆಟ್ರೋ ರೈಲಿನ ಹುಡುಗಿ” ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ