Advertisement
ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು

ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು

1

ನಿಷಿದ್ಧ ಸಮಯದಲ್ಲಿ ನಿಶೇಕಕ್ಕೆ ತಯಾರಾದವನಂತೆ…..

ಇಷ್ಟಿಷ್ಟೇ ಕತ್ತಲನ್ನು ತಿನ್ನುತ್ತಾ
ದಾಪುಗಾಲಿಡುತ್ತಿರುವ ಬೆಳಗು
ಕಿರ್ರ್ ಎನ್ನುವ ಯಾವುದೋ ಹಕ್ಕಿಯ ರಾಗ
ದೂರದ ನಾಯಿ ಬೊಗಳುವಿಕೆ
ನೋಯುತ್ತಿರುವ ತೊಡೆಗಳ ಮೇಲ್ಭಾಗ
ತಡೆಯಲಾಗದ ಸ್ರಾವ
ಕಾಗೆಯೊಂದರ ಮೂದಲಿಕೆ
ಬೆಳಗಿನ ನೆಂಟನ ನಿರಂತರ ಕರೆ

ಅದೇ ಬೆಳಗು ಅದೇ ನಾನು…
ಮೊಟ್ಟೆಯೊಳಗೆ ಅವಿತುಕೊಂಡು
ಅಂಗಾಂಗ ಬೆಳೆದು ಪುಷ್ಟಿಯಾದಮೇಲೂ
ಹೊರಬರಲಾಗದಂತೆ ತಡೆಯುತ್ತಿರುವ ಶಕ್ತಿಗೆ
ನಾ ಹೆದರುತ್ತಿಲ್ಲ ಹೋರಾಡುತ್ತಿರುವುದು
ಯಾಕಾದರೂ ತಿಳಿಯುತ್ತಿಲ್ಲ

ಚಿವ ಚಿವ ಗುಬ್ಬಿ ಸಂತೆಯೊಳಗೆ
ಅನಾಥ ನರಳುವ ನೋವಿಗೆ
ಬೆಳಗಿನ ವೈವಿಧ್ಯತೆ ಇಲ್ಲವಷ್ಟೆ
ಆದರೂ ತಣ್ಣನೆಯ ಹೊತ್ತಲ್ಲೂ
ಕೊರೆದು ನೋಯಿಸಬಲ್ಲ ತೀವ್ರತೆ ಇದೆ
ಕಿಬ್ಬೊಟ್ಟೆಯ ಸಾಕ್ಷಿಯಾಗಿಯೂ

ಇದೇ ಹೊತ್ತಲ್ಲಿ ನೀನೂ ಆವರಿಸತೊಡಗಿದ್ದೀ
ಇಚ್ಛೆಯರಿಯದವನಂತೆ
ನಿಷಿದ್ಧ ಸಮಯದಲ್ಲಿ ನಿಶೇಕಕ್ಕೆ
ತಯಾರಾದವನಂತೆ
ಚಿವ ಚಿವ ಸದ್ದು ಜೋರಾಗುತ್ತಿದೆ
ಅಜ್ಞಾತ ಹಕ್ಕಿಯ ಕೂಗೂ…
ಮೇಲ್ತೊಡೆಯ ನೋವೂ…
ತಡೆಯಲಾಗದ ಸ್ರಾವವೂ…

ಕಾಲ ಕಿರುಬೆರಳಿಂದ
ನೆತ್ತಿಯವರೆಗೂ ಹಬ್ಬುತ್ತಿರುವ
ಕೆಂಡದ ಉರಿಯೊಳಗೆ ಮೊಟ್ಟೆ
ಮರಿ ಸಮೇತ ಬೇಯುತ್ತಿರುವಾಗ
ವಾಸನೆ ಸುತ್ತೆಲ್ಲಾ ಹರಡುತ್ತಾ
ಪ್ರತಿಭಟನೆಯದೊಂದು
ಭಾಗವಾಗುತ್ತಿದೆ….

2

ಸತ್ತ ಎಲೆಗಳ ಮೇಲೆ

ಅವನಂದ
ಇಲ್ಲಿ ಸತ್ತ ಎಲೆಯ
ಮೇಲೂ ಒಂದೊಂದು
ಹೆಸರಿದೆ ಎಂದು
ಸತ್ತ ಹೃದಯದ ಮೇಲೆ
ನಿನ್ನ ಹೆಸರಿದೆ ಎಂದು ಹೇಳಲು
ಹಿಂಜರಿದೆ…

ಬದಲಾಗಿ ಜೀವಂತ ಎಲೆಗಳ
ಹಸಿರು ಸಮೃದ್ಧಿಯಲಿ
ಉಸಿರಾಡುತ್ತಿರುವ
ಹೆಸರೊಂದಕ್ಕಾಗಿ
ಹೂಮಾರುವ ಹಸಿದ
ಹರಿದ ಬಟ್ಟೆ ತೊಟ್ಟ
ಆ ಅವನ
ತುಳುಕುವ ಕಿರಣದ
ಕಣ್ಣುಗಳನ್ನು
ಬಳಸಿಬಿಟ್ಟೆ…

ಮತ್ತೆ ಅವನ್ಯಾರೋ
ಮೂಲೋಕ ತಿಳಿದ ವಿರಾಗಿಯ
ಪುನರ್ಜನ್ಮದವನಿರಬೇಕು
ಅರೆ ಕ್ಷಣ ಎಲ್ಲವನ್ನೂ ಕಾಣಿಸಿ
ಮರು ಕ್ಷಣ ಎಲ್ಲವನ್ನೂ ಮರೆಸಿ
ಹೆಜ್ಜೆಗಳ ಗುರುತನ್ನು ಅಳಿಸುತ್ತಾ
ಇಲ್ಲವಾಗಿಬಿಟ್ಟ

ಈಗ ಸತ್ತ ಎಲೆಗಳ
ರಾಶಿ ಮಾಡಿ ಬೆಂಕಿ ಇಟ್ಟು
ಚರ್ಮದ ಮೇಲೆ ಸೆಟೆದು ನಿಂತ
ಚಳಿ ಗುಳ್ಳೆಗಳ ಮಲಗಿಸುತ್ತಾ
ಉಸಿರಾಡುವ ಹಸಿರೆಲೆಯ ಮೇಲೆ
ಹೆಸರೊಂದ ಬರೆದೆ

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ