Advertisement
ಪರದೇಶದಲ್ಲಿ ಸಿನಿಮಾ ಪರದಾಟ:ಸುಜಾತಾ ತಿರುಗಾಟ ಕಥನ

ಪರದೇಶದಲ್ಲಿ ಸಿನಿಮಾ ಪರದಾಟ:ಸುಜಾತಾ ತಿರುಗಾಟ ಕಥನ

ಸಿನಿಮಾ ಚರ್ಚೆಯನ್ನು ಕೇಳಿಸಿಕೊಳ್ಳುತ್ತಿದ್ದ ಕಿವಿಯ ಆಲೆ ಹಾಗೂ ಮನಸ್ಸು ಹಿಂದಕ್ಕೆ ತಿರುಗಿ ನೋಡಿತು. ನಲವತ್ತು ವರುಶದ ಹಿಂದೆ ಇದೇ ಒಂದು ಹಿಡಿ ಅನ್ನಕ್ಕಾಗಿ ಅಡಿಗೆ ಮನೆ ಕಿಟಕಿಯಲ್ಲಿ ತೂಗಿ ಬಿದ್ದ ಮಕ್ಕಳ ತಾಯಿಯರ ಸ್ವರಗಳು….. ಕೈಗಳು, ಅನ್ನ ಬಸಿಯುವ ತಪ್ಪಲೆಯನ್ನೇ ಕಾಯುತ್ತಾ ಗೋಡೆ ದಿಂಡಿಗೆ ಒದೆಕೊಟ್ಟು ನಿಲ್ಲುತ್ತಿದ್ದ ಕಾಲುಗಳು. ಆ ಸಣ್ಣ ಕಿಡಕಿಯಲ್ಲಿ ನಾಕಾರು ತಲೆಗಳು. ಬಟ್ಟಲು ಹಿಡಿದ ಅವರ ಕೈಗಳು.
ಹೆಚ್ ಆರ್ ಸುಜಾತಾ ತಿರುಗಾಟ ಕಥನ

ಅಲ್ಲಿಗೆ ಬಂದಿದ್ದ ೧೬೮ ದೇಶದ ಅಂಗಳದಲ್ಲಿ ಭಾರತ ದೇಶದ ಅಂಗಳವೊಂದನ್ನು ಹುಡುಕಿ ಹೋದೆವು. ಕಾಣದ ಹೊಸ ದೇಶ. ಹೊಸ ವೇಷ. ಹುಡುಕಿ ಹುಡುಕಿ ಎಲ್ಲವನ್ನೂ ಕಂಡುಕೊಳ್ಳಬೇಕಾದ ಪರಿಸ್ಥಿತಿ. ಮನೇಲಿ ಹುಲಿ ಬೀದೀಲಿ ಇಲಿ ಅನ್ನೋ ಹಾಗೆ ನಮ್ಮ ಗುಂಪು ಅವರಿಗೆ ತಿಳಿಯದ ನಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತ ಕೇನ್ಸ್ ಜಾತ್ರೆಯಲ್ಲಿ ಕಂಡದ್ದನ್ನೆಲ್ಲಾ ಮೊಬೈಲ್ ನಲ್ಲಿ ಪಣಕ್ ಅನ್ನಿಸಿದ್ದೇ ಅದರ ಅಕರಾಳ ವಿಕರಾಳದ ಹೊಟ್ಟೆ ತುಂಬಿಸುತ್ತಾ ನಾವು ತೆಗೆದ ಚಿತ್ರವನ್ನು ನೋಡಿ ನಾವೇ ಚಿತ್ರ ಬಿಡಿಸಿದಂತೆ ಬೀಗಿಬಿದ್ದೋಗುತ್ತಾ ನಾವು ಮುಂದೆ ಮುಂದೆ ಸಾಗುತ್ತಿದ್ದೆವು.

ನಮ್ಮಂಥ ಸತ್ಪ್ರಜೆಗಳನ್ನು ಯಾವುದೇ ಮುಲಾಜಿಲ್ಲದೆ ಕ್ಯೂ ನಿಲ್ಲಿಸುವುದೂ ಅಲ್ಲದೆ ನಮ್ಮನ್ನು ಶರಣಾಗುವಂತೆ ನಿಲ್ಲಿಸಿ ಇಡೀ ದೇಹವನ್ನೇ ಸ್ಕ್ಯಾನ್ ಮಾಡಿದ್ದೂ ಅಲ್ಲದೆ… ನಮ್ಮ ಸಕಲೆಂಟು ಆಭರಣಗಳನ್ನು ಮೂಲೆಗುಂಪು ಮಾಡಿದ್ದೂ ಅಲ್ಲದೆ… ನಮ್ಮ ತಿಜೋರಿಯ ಬಾಯಿ ಕಳೆದು ಅದರೊಳಗಿದ್ದ ನಮ್ಮ ಹೂರಣವನ್ನು ಬಗೆದು ನೋಡುವ ಬಗೆಗೆ ನಾವು ವಿಮಾನ ನಿಲ್ದಾಣದಿಂದಲೇ ಪರಿಣಿತಿ ಹೊಂದಿದ್ದೆವಾದರೂ ಕೇವಲ ನಮ್ಮ ಕತ್ತಲ್ಲಿ ತೂಗುಬಿದ್ದಿದ್ದ ಅವರು ದಯಪಾಲಿಸಿದ್ದ ಒಂದು ಪ್ಲಾಷ್ಟಿಕ್ ಕಾರ್ಡ್ ನ ಮೂಲಕ ಅವರ ದೇಶದ ಅಗಾಧವಾದ ವಿಭಿನ್ನ ಲೋಕಕ್ಕೆ ನಮ್ಮನ್ನು ಹರಿಬಿಡುತ್ತಿದ್ದರು.

ನಮ್ಮ ದೇಶದಲ್ಲಿ ಮಾಡಿದ ಹೆಸರಿನಿಂದಲೇ ತಲೆಯೆತ್ತಿ ಓಡಾಡುವ ಪ್ರಜೆಗಳಾದವರಂಥವರ ಮುಖದಲ್ಲಿಯೂ ತಮ್ಮ ಗುರುತಿನವರು ಯಾರಾದರೂ ಸಿಕ್ಕಿದ್ದೇ ತಮ್ಮನ್ನು ಗುರುತಿಸಿ ಕಂಡುಹಿಡಿದಾರೇನೋ ಎಂಬ ಒಳಾಸೆಗಳು ಇದ್ದರೂ ಆ ಅಪರಿಚತತೆಯ ಒಳಗೆ ಎಲ್ಲರೂ ಕಳೆದುಹೋಗುತ್ತಲೇ ಹೊಸಲೋಕದ ವಿಸ್ಮಯಗಳನ್ನು ಕಣ್ಣಲ್ಲಿ ದಾಖಲಿಸುತ್ತಾ ನಡೆದಂತೆ ಆ ಹಾಸಿದ ರೆಡ್ ಕಾರ್ಪೆಟ್ ಹಾಸುಗಳು ಒಂದು ನಿರ್ಭಿಡೆಯನ್ನು ನಮ್ಮೊಳಗೆ ಹುಟ್ಟು ಹಾಕುತ್ತಿದ್ದುದಂತೂ ಸುಳ್ಳಲ್ಲ.

ನಡೆಯುತ್ತ ನಡೆಯುತ್ತಾ ಅಲ್ಲಿನ ಚಂದುಳ್ಳಿ ಚೆಲುವೆಯರಲ್ಲದೆ ಅಲ್ಲಿನ ಕಾವಲುಗಾರರಾದಿಯಾಗಿ ಎಲ್ಲರೂ ಹೊಳೆಯುವ ತಮ್ಮ ಬಣ್ಣಕ್ಕೆ ಕಪ್ಪು ಸೂಟಿನ ಉಡುಗೆ ಧರಿಸಿ ನಿಂತು ಬಾಗುವ ಚೆಂದಕ್ಕೆ ಮರುಳಾಗಿ ಛಟಪಟನೆ ಅವರು ಓಡಾಡುವ ಭರಸಿನ ನಡುವೆ ನಮ್ಮ ಭಾರತದವರನ್ನು ಅಲ್ಲೇನಾದರೂ ಕಂಡರೆ ಬೀಗಿ ನಮ್ಮೂರಿನ ಯಾವುದೇ ಭಾಷೆಯಲ್ಲಿ ಅವರು ಮಾತನ್ನಾಡಿದರೂ ಜೈ ಭಾರತ್ ಮಹಾನ್ ಎಂದುಕೊಳ್ಳುತ್ತಿರುವಾಗಲೇ ಅವರ ಕಾರ್ಯಭಾರದಲ್ಲಿ ಅವಸವಸರವಾಗಿ ಅವರು ಕಳಚಿಕೊಳ್ಳುತ್ತಿದ್ದರು. ಅವರೂ ಅವರಿಗೆ ಬೇಕಾದ್ದನ್ನು ತಡಕುವ ಉದ್ದೇಶದಿಂದ ಮುಂದೆ ಸಾಗಿ ಹೋದಾಗ ನಾವು ಬಂದ ನಮ್ಮ ಉದ್ದೇಶಕ್ಕೆ ಎಚ್ಛೆತ್ತುಕೊಳ್ಳುತ್ತಿದ್ದೆವು.

ಭಾರತ ದೇಶದ ಸಿನಿ ಮಾರುಕಟ್ಟೆಯ ಮಳಿಗೆಗಳ ನಡುವೆ ನಮ್ಮೂರಿನ ಹೆಸರಾಂತ ಸಿನಿಮಾ ಪೋಸ್ಟರ್ ‘ತಿಥಿ’ಯ ಗಡ್ಡಪ್ಪನೂ ಆ ಪೋಸ್ಟರ್ ನ ತಿರುಗಣೆಯಲ್ಲಿ ತಿರುಗುವದನ್ನ ಕಂಡು ನಮ್ಮೂರಿನ ಕುರಿ ಕಾಯುವ ಬಯಲು ನೆನಪಾಗಿ ಒಮ್ಮೆ ಮನಸ್ಸು ಯೋಚನೆಗೊಳಗಾಯಿತು. ನಮ್ಮೂರಿನ ಗಡ್ಡಪ್ಪನ ಬದುಕು ಬಯಲಿಂದ ರೆಡ್ ಕಾರ್ಪೆಟ್ ಏರಿಯಾಕೆ ಬಂದು ಕೇನ್ಸ್ ಫೆಸ್ಟಿವಲ್ ನೋಡುಗರ ಕಣ್ಣ ಗೊಂಬೆಯಾಗಿ ಕುಳಿತ ಒಂದು ಛೆಂದಕ್ಕೆ ನಾವು ಮೋಹಗೊಂಡು ಮೊಬೈಲ್ ನಲ್ಲಿ ಅದನ್ನು ಸೆರೆ ಹಾಕಿದೆವು.

ಗಡ್ಡಪ್ಪನೂ ಹೆಂಡತಿ ಕೈಲಿ ಮೂತಿ ತಿವಿಸಿಕೊಂಡು “ಹೋಗ್ ಮೂದೇವಿ” ಅಂತ ಕುರಿ ಕರ ಮರಿ ಬಿಟ್ಕಂಡು ಹೋಗೋದು ಬಿಟ್ಟು ಈಗ ಸೊಸೇರ ಕೈಲಿ ಬಟ್ಟೆ ಮಡಿ ಮಾಡಿಸ್ಕಂಡು ಸಿನಿಮಾ ತೆಗ್ಯೋರ ಹಿಂದೆ ಶೂಟಿಂಗ್ ಗೆ ಹೋಗೋ ಚೆಂದವ ಅವರ ಊರೋರು ನೋಡತಾ ನಿಂತ್ಕಂತರಂತೆ ಅನ್ನೋ ಸುದ್ದೀನ ಮಂಡ್ಯದವರು ಮಾತಾಡ್ಕಂತರೆ ಅಂತ ಗಡ್ಡಪ್ಪನ ನೆಂಟರ ಹುಡುಗ ಹೇಳಿದ್ದು ನೆನಪಾಯಿತು.

ನಮ್ಮೂರಿನ ನೆನಪಲ್ಲೇ ಮುಂದೆ ಹೋಗಿ ಡೈನಿಂಗ್ ಏರಿಯಾ ತಲುಪಿ ಅಲ್ಲಿ ಒಟ್ಟಿದ್ದ ಬ್ರೆಡ್ ತುಂಡು, ಊರಗಲದಲ್ಲಿ ಜೋಡಿಸಿಟ್ಟಿದ್ದ ಅರೆಬೆಂದ ಮಾಂಸದ ತುಂಡುಗಳ ಹಸಿ ತರಕಾರಿಗಳ ಮೆರವಣಿಗೆ ಕಂಡರೂ ಹಸಿವೆಗಿಂತ ವಾಕರಿಕೆ ಹೆಚ್ಚಾಗಿ, ಖಾರವಿಲ್ಲದೆ ಉಪ್ಪಿಲ್ಲದೆ ಈ ಜನ ಹೆಂಗೆ ಬದುಕ್ತಾರಪ್ಪಾ! ಅಂತ ಯೋಚನೆ ಬರುವುದರ ಜೊತೆಗೆ ನಮ್ಮ ಊಟ ಇವ್ರಿಗೆ ಖಂಡಿತ ಇಷ್ಟ ಆಗಬಹುದು ಅಂತ ಬಲವಾಗಿ ಅನ್ನಿಸಿತು. ಮನಸ್ಸು ಒಲ್ಲೆ ಅಂದರೂ ಕಾಫಿ ಬಿಸ್ಕತ್ತು ತಗೊಂಡು ಅವರತ್ರ ಹಾಲು ಬೇಡಿ ತಣ್ಣಗಿರೋ ಪೊಟ್ಟಣದ ಹಾಲು ಬಸಿಸಿಕೊಂಡು ಇತ್ತಲಾಗೇ ಬಿಸಿನೂ ಅಲ್ಲದ ಅತ್ತಲಾಗೆ ತಣ್ಣಗೂ ಅಲ್ಲದ ಅರೆಬೆಚ್ಛನೆ ಕಾಫಿಯ ಘಾಟು ಹೀರಿ ನಮ್ಮವರೊಬ್ಬರನ್ನು ಮೀಟ್ ಮಾಡಿ ಸಿನಿಮಾ ಜಗತ್ತಿನಲ್ಲಿ ಅಡ್ಡಾಡುವ ಜಾಗಗಳ ತಿಳುವಳಿಕೆಯ ಜೊತೆಗೆ ಅವರ ಹಿತವಾದ ಕಿವಿ ಮಾತೊಂದನ್ನು ಕೇಳಿಸಿಕೊಂಡೆವು.

ಇಂಡಿಯನ್ ಪೆವಿಲಿಯನ್

ಅಲ್ಲಿ ಇಂಡಿಯನ್ ಪೆವಿಲಿಯನ್ ಕಡೆ ಹೋದ್ರೆ ನಿಮಗೆ ನೀರು ಕಾಫಿ ಟೀ ವ್ಯವಸ್ಥೆ ಇರುವುದಾಗಿಯೂ ಹಾಗೇ
ಎದುರಿಗಿನ ಹೋಟೆಲ್ಲಿನ ಲಾಂಜ್ ನಲ್ಲಿ ನಮ್ಮ ಇಂಡಿಯಾ ಸಿನಿಮಾ ಜಗತ್ತಿನ ಚರ್ಚೆಗಳು ನಡೆವುದಾಗಿಯೂ ಹೇಳಿದರು. ಅಲ್ಲಿ ಅವರಿವರು ಕೆಲವು ಗುರುತಿನವರು ಸಿಕ್ಕರೂ ಎಲ್ಲರೂ ಅವರವರ ಜಗತ್ತಿನಲ್ಲಿ ಗಮನ ಸೆಳೆಯಲು ಓಡಾಡುತ್ತಿರುವ ಬೆಡಗು ಹಾಗೂ ತಮ್ಮ ಕಾರ್ಯಾಚರಣೆಯಲ್ಲಿ ಬಿಸಿಯಾಗಿರುತಿದ್ದ ಜಗತ್ತನ್ನು ಕಟ್ಟಿಕೊಂಡವರಂತೆ ಕಂಡರು. ನಾವು ಅದನ್ನು ಗಮನಿಸುತ್ತಲೇ ಅಲ್ಲಿ ಇರುವ ವ್ಯವಸ್ಥೆಯನ್ನು ತಕ್ಕಮಟ್ಟಿಗೆ ಉಪಯೋಗಿಸುವತ್ತ ಗಮನ ಹರಿಸಿದೆವು.

ಆ ದಿನದ ಮಧ್ಯಾನದ ಊಟದ ವ್ಯವಸ್ಥೆಯಂತೂ ಸಧ್ಯಕ್ಕೆ ಪರಿಹಾರವಾಗಿದ್ದೂ ಅಲ್ಲದೆ ಅಲ್ಲಿನ ನಡೆಯುವ ಸಿನಿಮಾ ಚರ್ಚೆಗಳು ಉತ್ತೇಜನಕಾರಿಯಾಗಿದ್ದವು. ಆದರೆ ಅಲ್ಲಲ್ಲೇ ಕೊಡುವ ಸಣ್ಣ ಉಪಹಾರದ ಸಿಹಿತಿಂಡಿಗಳು ಉತ್ತರಭಾರತದ ಸಿಹಿಯ ಮೋಹವನ್ನು ತೋರಿಸುತ್ತಿದವು. ಎದುರಿನ ಅದ್ದೂರಿ ಹೋಟೆಲ್ಲಿನಲ್ಲಿಟ್ಟ ಭಾರತೀಯರ ಬಗೆಬಗೆಯ ಅಡುಗೆಗಳು ನಮ್ಮ ಕೆಟ್ಟ ನಾಲುಗೆಗೆ ಚೈತನ್ಯ ನೀಡಿದ್ದೂ ಅಲ್ಲದೆ ಅಂದಿನ ಇಳಿ ಸಂಜೆಯಲ್ಲಿ ಕಾನ್ ಎಂಬ ಸಣ್ಣ ಪ್ರದೇಶದಲ್ಲಿ ೭೦ ವರ್ಷಗಳ ಕಾನ್ ಸಿನಿಮಾ ಇತಿಹಾಸದಲ್ಲಿ ತಮ್ಮ ಬಾವುಟಗಳನ್ನು ಹಾರಿಸಿದ ಅಭಿವೃದ್ಧಿ ದೇಶದ ನಡುವೆ ಇಂಡಿಯಾದ ಬಾವುಟವೂ ಹಾರಿದ್ದಂತ ನಮ್ಮ ಪೆವಿಲಿಯನ್ ನಲ್ಲಿ ಒಬ್ಬ ಜರ್ಮನಿಯ ಡೈರೆಕ್ಟರ್ ನಡುವೆ ಮಾತುಕತೆಯಾಗುತಿತ್ತು. ಅದರಲ್ಲಿ ನಾವೂ ಕಿವಿ ತೆರೆದು ಕೂತೆವು.

ನಡುನಡುವೆ ಕಾಫಿ ನೀರು ಸೀ ತಿಂಡಿಗಳನ್ನು ಹಿಡಿದು ಓಡಾಡುತ್ತಿದ್ದ ಚೆಂದದ ಪರಿಛಾರಿಕೆಯರ ಟ್ರೇ ನಲ್ಲಿ ಒಂದೇ ಒಂದು ಸಣ್ಣ ಜಾಮೂನು ಹಿಡಿಸುವಂಥ ಬಟ್ಟಲಿನಲ್ಲಿ ಕೊಟ್ಟ ಇನ್ನೊಂದು ಹೊಸ ತಿಂಡಿಯನ್ನು ನೋಡಿದ್ದೇ ಇನ್ನೊಮ್ಮೆ ಕಣ್ಣರಳಿಸಿದೆವು. ಹೊಟ್ಟೆ ಹುಣ್ಣಾಗುವಂತೆ ನಗು ತುಟಿ ಮೇಲಕ್ಕೆ ಬಂದಿಳಿಯಿತು. ಯಾಕೆಂದರೆ ಎರಡು ಛಮಛೆ ಅನ್ನಕ್ಕೆ ಒಂದು ಚಮಚೆ ಬಟಾಣಿ ಆಲೂಗೆಡ್ಡೆ ಗೊಜ್ಜು ಹಾಕಿತ್ತು. ಒಂದೇ ಒಂದು ತುತ್ತು ಅನ್ನಕ್ಕೆ ಸಣ್ಣ ಬಟ್ಟಲಿನ ಅಂದ ಹಾಗೂ ಮುಳ್ಳು ಚಮಚೆಯ ಅಲಂಕಾರ ಬೇರೆ…..

ನಮ್ಮೂರಿನ ಗಡ್ಡಪ್ಪನ ಬದುಕು ಬಯಲಿಂದ ರೆಡ್ ಕಾರ್ಪೆಟ್ ಏರಿಯಾಕೆ ಬಂದು ಕೇನ್ಸ್ ಫೆಸ್ಟಿವಲ್ ನೋಡುಗರ ಕಣ್ಣ ಗೊಂಬೆಯಾಗಿ ಕುಳಿತ ಒಂದು ಛೆಂದಕ್ಕೆ ನಾವು ಮೋಹಗೊಂಡು ಮೊಬೈಲ್ ನಲ್ಲಿ ಅದನ್ನು ಸೆರೆ ಹಾಕಿದೆವು.

ಬಾಯಿಗೆ ಹಾಕಿಕೊಂಡೆವು. ಅದರಲ್ಲಿದ್ದ ಒಂದೊಂದೇ ಅಗುಳಗಳನ್ನೂ ಅಗಿದು ತಿಂದೆವು. ಅವರು ಕೊಟ್ಟಿದ್ದ ಚಿನ್ನಾರಿ ಫೋರ್ಕ್ ನಲ್ಲಿ ಎರಡಗಳಿಗಿಂತ ಹೆಚ್ಚು ಬಾಯಿಗೆ ಬರುತ್ತಿರಲಿಲ್ಲ. ಬಾಸುಮತಿ ಅನ್ನದ ರುಚಿಗೆ ಇನ್ನೊಂದು ಬಟ್ಟಲು ತೆಗೆದುಕೊಂಡು ತಿಂದೆವು. ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ! ಎರಡು ಬಟ್ಟಲ ಅನ್ನ ಸೇರಿದರೆ ಆರು ತಿಂಗಳಿನ ಕೂಸಿಗೆ ಉಣ್ಣಿಸುವ ಒಂದು ಮಿದಿಕೆ ಅನ್ನ.

ಕಾನ್ಸ್ ನಲ್ಲಿ ನಮ್ಮೂರ ನೆನಪು

ಸಿನಿಮಾ ಚರ್ಚೆಯನ್ನು ಕೇಳಿಸಿಕೊಳ್ಳುತ್ತಿದ್ದ ಕಿವಿಯ ಆಲೆ ಹಾಗೂ ಮನಸ್ಸು ಹಿಂದಕ್ಕೆ ತಿರುಗಿ ನೋಡಿತು. ನಲವತ್ತು ವರುಶದ ಹಿಂದೆ ಇದೇ ಒಂದು ಹಿಡಿ ಅನ್ನಕ್ಕಾಗಿ ಅಡಿಗೆ ಮನೆ ಕಿಟಕಿಯಲ್ಲಿ ತೂಗಿ ಬಿದ್ದ ಮಕ್ಕಳ ತಾಯಿಯರ ಸ್ವರಗಳು….. ಕೈಗಳು, ಅನ್ನ ಬಸಿಯುವ ತಪ್ಪಲೆಯನ್ನೇ ಕಾಯುತ್ತಾ ಗೋಡೆ ದಿಂಡಿಗೆ ಒದೆಕೊಟ್ಟು ನಿಲ್ಲುತ್ತಿದ್ದ ಕಾಲುಗಳು. ಆ ಸಣ್ಣ ಕಿಡಕಿಯಲ್ಲಿ ನಾಕಾರು ತಲೆಗಳು. ಬಟ್ಟಲು ಹಿಡಿದ ಅವರ ಕೈಗಳು.

“ಅನ್ನ ಬಸಿಯಕ್ಕೂ ಬಿಡಕ್ಕುಲ್ವಲ್ರೇ ನಿಮ್ಮನಿಕ್ಕಾಯೋಗ” ಅನ್ನುವ ಅವ್ವನ ಮಾತಿಗೇ ತಿರುಮಂತ್ರವಿಡುತ್ತಿದ್ದ ಅವರ ಮಾತುಗಳು.
“ನಿಮ್ಮತ್ತೆಮ್ಮರ ಕೈಲಿ ತಡ ಮಾಡಕಂಡು ಹೋಗಿ ಕೊಟಕ ಕೊಟಕನೆ ಬೈಸ್ಕಳರು ಯಾರೀ….” ಅನ್ನುವ ಅವರ ಮಾತಿಗೆ ಅರಳಕ್ಕಿಟ್ಟ ಅನ್ನವನ್ನ ಕಿಟಕಿಯ ಸರಳಿನ ನಡುವೆ ದೊಡ್ಡ ಸೊಟಕದಲ್ಲಿ ತೂರಿಸಿ ಬಟ್ಟಲಿಗೆ ಹಾಕುತ್ತಿದ್ದ ಅವ್ವ.
“ಸರ್ರನೆ ಮಕ್ಕಳ ಹೊಟ್ಟೆಗುಣ್ಣಿಸಿ ಮೊದ್ಲು ಗದ್ದೆತಕ ಹೋಗಿ” ಅಂತ ನಿರ್ದೇಶಿಸುತಿತ್ತು.

ಮನೇಲಿ ಇದ್ದದ್ದನ್ನು ಉಂಡು ಕೆಲಸಕ್ಕೆ ಬರುತ್ತಿದ್ದ ನಮ್ಮೂರ ಆಳುಮಕ್ಕಳು ಮಕ್ಕಳಿಗಾಗಿ ಬಿಸಿಅನ್ನವನ್ನು ಹಾಕಿಸಿಕೊಂಡು ಹೋಗುತ್ತಿದ್ದರು. ನೆಲದಿಂದ ಎತ್ತರದಲ್ಲಿದ್ದ ಅಡಿಗೆ ಮನೆಯ ಆ ಕಿಟಕಿಯನ್ನೇರಿ ನಾಕಾರು ಬಟ್ಟಲು ಹಿಡಿದು ನಿಲ್ಲುತ್ತಿದ್ದ ಮುಖಗಳು ಇನ್ನೂ ಮನದಲ್ಲಿ ಹಾಗೇ ನೇತು ಹಾಕಿಕೊಂಡಿವೆ.

ಮೂರರಿಂದ ಆರು ಸೇರು ಬೇಯುವ ಆ ತಪ್ಪಲೆಗಳಲ್ಲಿ ಕುದಿಯುತ್ತಿದ್ದ ಅನ್ನ ಗಂಜಿ ಬಸಿದು ನಿರಾಳವಾಗಿ ಕೆಂಡದ ಮೇಲೆ ಅರಳಿ ಹೂವಾಗುವ ವೇಳೆಗೆ ಈ ಅನ್ನದಾನದ ಪಟ್ಟಿಯೂ ಸೇರಿ ಅಲ್ಲೇ ಅರ್ಧ ಸೇರಕ್ಕಿ ಅನ್ನ ಖಾಲಿಯಾಗುತಿತ್ತು. ಉಳಿದದ್ದು ಮತ್ತೆ ಕೆಂಡದ ಕಾವಿಗೆ ಮುಚ್ಚಿದ ಮುಚ್ಛಳದ ಉಬ್ಬಸಕ್ಕೆ ದಮ್ಮುಕಟ್ಟಿ ಹಗುರಾಗುವ ಕಾಯಕದಲ್ಲಿರುತ್ತಿತ್ತು.

ಅಕ್ಕಿ ಮೂಟೆಯ ಅಪ್ಪ, ಅಳಿಮಯ್ಯರ ಸ್ವಾಭಿಮಾನ

ಅಕ್ಕ ಹಾಸನದ ನನ್ನ ದೊಡ್ಡಮ್ಮನ ಮನೆಯಲ್ಲಿ ಓದಿದವಳಾಗಿದ್ದು ಅವರ ಮನೆಯ ಸಿರಿವಂತ ನಯನಾಜೂಕಿಗೆ ಒಗ್ಗಿದ್ದಳು. ಓದಿ ಬೂದಿ ಹಿರಿದು ಡಿಗ್ರೀ ತೆಗೆದುಕೊಂಡು ಬಂದವಳೇ ಬೇಸಾಯದ ನಮ್ಮ ಮನೆಯ ಪಡಿಪಾಟಲನ್ನು ಕಣ್ ಕಣ್ ಬಿಟ್ಟು ನೋಡುತ್ತಾ…. ಸ್ಪಂದಿಸುತ್ತಾ ಎಲ್ಲಾ ಕೆಲಸದ ಒರಟುತನವನ್ನು ಮೈಗೂಡಿಸಿಕೊಳ್ಳುತ್ತ ಮನೆಯ ಏಳಿಗೆಯನ್ನಷ್ಟೇ ಗುರಿಯಾಗಿಸಿಕೊಂಡು ಬೇಸಾಯದ ಕೆಲಸಕ್ಕೂ ಕೈ ಹಾಕಿ ಸೈ ಅನ್ನಿಸಿಕೊಂಡಿದ್ದಳು. ಆದರೆ ಮುದ್ದೆ ಮುರಿಯುವುದನ್ನು ಮಾತ್ರ ಕಲಿಯಲಿಲ್ಲ. ನಮ್ಮ ನಾಡಿನಲ್ಲೂ ಮುದ್ದೆ ಊಟಕ್ಕಿಂತ ಅನ್ನವೇ ಮುಖ್ಯವಾಗಿದ್ದರೂ ಕೆಲವು ಸಂಧಿಗ್ಧ ಹಾಗೂ ಮೈ ಬಲಕ್ಕಾಗಿ ಅಲ್ಪಸ್ವಲ್ಪ ರಾಗಿ ಬೆಳೆದು ಇಟ್ಟುಕೊಳ್ಳುತ್ತಿದ್ದರು.

ಹೀಗೆ ಇಟ್ಟುಕೊಂಡ ರಾಗಿ ವರ್ಷದ ಕೊನೆಯಲ್ಲಿ ಒಂದೆರಡು ತಿಂಗಳು ಮುಗಿದ ಭತ್ತದ ಪರ್ಯಾಯವಾಗಿ ಹೆಚ್ಚು ಬಳಕೆಯಾಗುತಿತ್ತು. ಒಕ್ಕಲು ಮನೆಯಲ್ಲಿ ಆಳುಕಾಳಲ್ಲದೆ ಸಕಲೆಂಟು ಜೀವರಾಶಿಗಳನ್ನು ಕಾಪಾಡಬೇಕು. ಗಿಳಿ ಗೊರವಂಕಗಳಿಂದ…. ಗುಬ್ಬಿ ಕಾಗೆಗಳವರೆಗೂ, ಕೋಳಿಗಳಿಂದ….. ಇಲಿ ಹೆಗ್ಗಣದವರೆಗೂ… ಬೆಕ್ಕು ನಾಯಿಗಳಿಂದ… ದನಕರುಗಳುವರೆಗೂ ಉಣಬಡಿಸಿ ಉಳಿದ ಕಾಳು ರೈತನದು.

ಇಂಥ ಪಡಿಪಾಟಲಲ್ಲಿ ಗದ್ದೆ ಭತ್ತ ಒಡೆಯಾಗುವ ಹೊತ್ತಿಗೆ ವಾಡೇ ತಳದಲ್ಲಿ ಕೂಡಿಟ್ಟ ಭತ್ತ ತಳ ಸೇರಿರುತ್ತಿತ್ತು. ಅಪ್ಪನ ಕಣ್ತಪ್ಪಿಸಿ ವಾಡೇ ತಳದಲ್ಲಿ ಮತ್ತೊಂದು ಛಾಪೆಯನ್ನು ಹಾಸಿ ಕೆಳಗೆ ಕಾಣದಂತೆ ಅವ್ವ ಹಾಕಿಸಿದ ಗೌಪ್ಯ ಭತ್ತದ ಕಣಜವೂ ಖಾಲಿಯಾಗಿ ಅಲ್ಲಿ ಕೊನೆಗೆ ಕೇವಲ ಗಂಜಲ ಹಾಕಿ ಸಾರಿಸಿದ ನೆಲ ಕೈಗೆ ಸಿಗುತ್ತಿತ್ತು.

ಆಗ ಒಲೆಮೇಲೆ ಅನ್ನದ ದೊಂಬರಾಟ ಶುರು. ಮನೆಯಲ್ಲಿ ರಾಗಿಗೆ ಬೆಲೆ. ವಾಡೆ ತಳದ ಮುಗ್ಗಿದ ಭತ್ತದ ಅನ್ನಕ್ಕೆ ಸಣ್ಣ ಕಿರುಗೈವಾಸನೆಯ ರುಚಿ. ಆಗ ತಾನೆ ಒಡೆಯಾಗಿರುವ ಗದ್ದೆ ಅಂಚಿನ ಭತ್ತ ತಂದು ಕುಟ್ಟಿ ಮಾಡುವ ತಿಳಿಹಸಿರು ಗಂಜಿ ಸುತ್ತಿಕೊಳ್ಳುವ ಅನ್ನ, ಹೀಗೆ…. ಅನ್ನದ ಪರಿಮಳ ಹಾಗೂ ರುಚಿ ಕೊಂಚ ಹದಗೆಟ್ಟಾಗ ಕೂಡ ಮುದ್ದೆ ಮುರಿಯದ ಅಕ್ಕನನ್ನು ನೋಡಿ

“ನಿನ್ನನ್ನು ಹೊಲಗಾಡಿನ ಗಂಡಿಗೆ ಕೊರಳು ಕಟ್ತೀನಿ.” ಅಂತ ಅಪ್ಪ ಅನ್ನೋದಂತೆ. ಹಾಗೆ….. ಭಾವನ ವಿದ್ಯೆಬುದ್ಧಿಗೆ ಬೆರಗಾಗಿ ವಿದ್ಯಾವಂತೆ ಮಗಳನ್ನ ಕೊಟ್ಟು ಅಪ್ಪಅಕ್ಕನನ್ನು ಮದುವೆ ಮಾಡಿದಾಗ ಅವರ ಮನೆಯ ಹೊಲಗಾಡನ್ನು ನೋಡಿ ಅಣ್ಣತಮ್ಮರ ಮನೆಯವರೆಲ್ಲ ಆ ಮಾತನ್ನು ನೆನೆದು ನಕ್ಕಿದ್ದರು. ಅಪ್ಪನ ಮಾತು ನಿಜ ಆಗಿತ್ತು.

ಹೀಗೇ ಸರಕಾರೀ ಕೆಲಸದ ಅಳಿಯ ಮನೆ ಮಾಡಿದರು ಹಾಸನದಲ್ಲಿ. ಅವರೂರು ಹೊಲಗಾಡಾದರೂ ಕಾಳುಕಡ್ಡಿ ಸಂಬಾರದ ಸಮೃದ್ಧಿ ಅವರ ಮನೆಯಲ್ಲಿ. ಆ ಕಾಳುಕಡ್ಡಿ ನಮ್ಮೂರಿಗೂ ಅವರೊಂದಿಗೆ ಬರುತ್ತಿತ್ತು. ಅವರೂರಲ್ಲಿ ಮಳೆ ಆದಾಗ ಮಾತ್ರ ಬೆಳೆಯುವ ಅಕ್ಕಿಗೆ ಸ್ವಲ್ಪ ಕೈ ಹಿಡಿತ. ಅವರತ್ತೆ ನಿಧಾನವಾಗಿ ತಟ್ಟೆಗೆ ಮುದ್ದೆ ಮುರಿದು ಹಾಕುತ್ತಾ ಅಕ್ಕನಿಗೆ ಮುದ್ದೆ ಗುಕ್ಕು ನುಂಗುವುದನ್ನೂ ಕಲಿಸಿದರು.

ಇಂತಿಪ್ಪ ಅಕ್ಕನ ಸಂಸಾರ ಕಂಡು ಬರಲು ಅಪ್ಪ ಅವರ ಮನೆಗೆ ಹೋದಾಗೊಮ್ಮೆ ಭಾವ ಅಂಗಡಿ ಅಕ್ಕಿ ತಂದಿದ್ದು ಇವರಿಗೆ ತಿಳಿದಿದೆ. ಊರ ತುಂಬ ಗದ್ದೆ ಇಟ್ಟುಕೊಂಡು ದಿನಕ್ಕೆ ಸೇರುಗಟ್ಟಲೇ ಅಕ್ಕಿ ಬೇಯುವ ಮನೇಮಗಳು ಕೊಂಡ ಅಕ್ಕಿ ಉಣ್ಣಬಹುದೇ ಅಪ್ಪನ ಕಣ್ಣೆದುರಲ್ಲಿ. ಮಾರನೇ ದಿನವೇ ಅಪ್ಪನ ಅಕ್ಕಿ ಮೂಟೆ ಊರಿನ ಗಾಡಿಯಲ್ಲಿ ರಸ್ತೆ ಸಾಗಿಸಿ, ಬಸ್ಸನ್ನೇರಿ, ಅಕ್ಕನ ಮನೆಗೆ ಅಪ್ಪನೊಂದಿಗೆ ಜಟಕಾ ಗಾಡಿಯಲ್ಲಿ ಸವಾರಿ ಮಾಡಿತು. ಆದರೆ… ಮುಂದಿನ ತಿಂಗಳಲ್ಲಿ ಅಪ್ಪನ ಅಕ್ಕಿ ಮೂಟೆ ಸವಾರಿ ಅಪ್ಪನ ಕಣ್ಣೀರಿನೊಂದಿಗೆ ತಿರುಗಿ ಬಂದಿತ್ತು. ಯಾಕೇ ಅಂದ್ರೆ….

ಭಾವ ಮಹಾನ್ ಆದರ್ಶವಾದಿ. ನಯಾ ಪೈಸೆ ಒಡವೆ ಏನನ್ನೂ ಮುಟ್ಟದೆ ಅಕ್ಕನನ್ನು ಮದುವೆ ಮಾಡಿಕೊಂಡಿದ್ದ ಅವರು “ನಿಮ್ಮ ತಂದೆ ತಂದ ಅಕ್ಕಿಯಲ್ಲಿ ನಮ್ಮ ಮನೆಯಲ್ಲಿ ದಿನನಿತ್ಯದ ಅನ್ನ ಆಗುವುದು ಬೇಡ. ನನಗೆ ಸಂಪಾದನೆ ಇದೆ ಎಂದು ನಿಮ್ಮ ತಂದೆಗೆ ಹೇಳಿಬಿಡು” ಎಂದಿದ್ದಾರೆ.

ಆದರೆ “ಮನೆಮಗಳು ಮನೆಯಲ್ಲಿ ಬೆಳೆದ ಕಾಳನ್ನು ಹಿಂತಿರುಗಿಸಿ ಅಂಗಡಿ ಅಕ್ಕಿ ಉಣ್ಣಬಹುದೇನೇ?”. ಅವ್ವನ ಬಳಿ ಅಪ್ಪನ ಅಹವಾಲು. ತಟ್ಟೆಯಲ್ಲಿ ಅನ್ನ ಬೆಣ್ಣೆಯ ಮೇಲೆ ಮೆಚ್ಛಿನ ಬಿಸಿಬಿಸಿ ನೀರುಸಾರಿನ ಘಮ ಉಕ್ಕಿ ಹರಿತಿದ್ದರೂ ಅಪ್ಪನ ಮನಸ್ಸು ಅಕ್ಕನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಅವ್ವ “ಅಳಿಮಯ್ಯರು ಒಳ್ಳೆದೆ ಮಾಡಿದಾರೆ, ಬಿಡಿ, ಅವರವರ ಮನೆ ಬದುಕು ಅವರಿಗೇ ದೊಡ್ಡದು. ದುಡದು ತಿಂತೀವಿ ಅನ್ನೋರನ್ನ ನಾವೇ ಕೈ ಕಟ್ಟಿ ಹಾಕೋದ್ಯಾಕೆ? ನೀನು ಸಾಯತಂಕ ಅನ್ನ ಹಾಕ್ತೀಯ ಅವ್ರಿಗೆ…….” ಅಂದಿದ್ದೆ ಅಪ್ಪ ಮೌನವಾಗಿ ಅನ್ನ ಕಲೆಸಿ ಬಾಯಿಗೆ ಹಾಕಿಕೊಳ್ಳುತಿತ್ತು. ಬೆಳಗಿಂದ ಬೆಂದ ಒಲೆ ಕೆಂಡಕ್ಕೆ ಬೂದಿ ಮುಚ್ಚುತಿತ್ತು.

ಇತ್ತ ಕೇನ್ಸ್ ನ ನಮ್ಮ ಇಂಡಿಯನ್ ಪೆವಿಲಿಯನ್ನಿನ ಅರೆಬಟ್ಟೆ ತೊಟ್ಟ ಬೆಡಗಿಯರು ಮುಚ್ಛಳದಂತ ಅನ್ನ ಕೊಟ್ಟ ಬಟ್ಟಲನ್ನು ಎತ್ತಿ ಡಸ್ಟ್ ಬಿನ್ ಗೆ ತುಂಬುತ್ತಿದ್ದರು. ಮಧ್ಯ ಮಧ್ಯ ಎಕ್ಸ್ ಕ್ಯೂಸ್ ಮಿ ಪದಗಳಿಗೆ ಅವರಿಗೆ ನಾವು ತಾವು ಬಿಡುತ್ತಾ ಹೋಟೆಲ್ಲಿಗೆ ಹೊರಟೆವು. ಇಂದು ನಮ್ಮ ಹೊಟ್ಟೆಯಲ್ಲಿ ಅನ್ನದೇವ ಪ್ರಸನ್ನನಾಗಿ ಒರಗಿದ್ದ.

About The Author

ಸುಜಾತಾ ಎಚ್.ಆರ್

ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ 'ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ