Advertisement
ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಕವಿತೆಗಳು

ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಕವಿತೆಗಳು

ಬೆಳದಿಂಗಳ ನಕ್ಷೆ

ಬಿರುಕು ಬಿಟ್ಟ ಗೋಡೆಯ ಮೌನದಲಿ
ಅಜ್ಞಾತ ಹಕ್ಕಿಯ ಗೂಡೊಂದು
ಮುಗಿಲ ಕೂಗುತಿತ್ತು

ಅಂಗಳ ತುಂಬಿದ ನೀರಿನ ದಡದಲಿ
ಮರಿಗಳ ಹಿಂಡು
ಕಣ್ಣಾಮುಚ್ಚಾಲೆ ಆಡುತ
ಪೇಪರ್ ಬೋಟಿನ ಕಣ್ಣೊಳಗೆ
ಆತ್ಮ ಸಂಗಾತವ ಕಳಕೊಂಡು
ಅಲೆಗಳ ಲೆಕ್ಕದಲಿ ಮೈಮರೆತವು

ಅವಳು ಬಿಡುಗಣ್ಣಲಿ
ಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತ
ಗೋಗರಿವ ಮುಳ್ಳುಗಳ ಹೃದಯದಲಿ
ಕಸಿ ತುಂಬೊ ರಸದ ಎಸಳಾದಳು

ಇಬ್ಬನಿಯ ಕಣ್ಣಿನ
ಹೂವಿನ ನೋಟದ ಹಾಗೆ!
ದಿಕ್ಕಿರದ ಬಾಗಿಲುಗಳ ಬಳ್ಳಿಗಳಲಿ
ಕರುಳಿನ ಪಾತ್ರೆಯಾಗಿ ಅಲೆವಳು

ಗೋಡೆಗಳ ನಡುವೆ
ಬೆಸುಗೆಯ ಚಿತ್ತ
ಬೆನ್ನಾಗ ಬಿಗಿದುಕೊಂಡು
ಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು

ಉರಿವ ಒಲೆಗಳ ಹೊಕ್ಕಳಲಿ
ನಕ್ಷತ್ರಗಳ ನೆಲಕ್ಕಿಳಿಸಿ
ಅವನ ಕಣ್ಣೊಳಗೆ
ಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿ
ಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ

ಹೆಗಲ ಗುರುತಾಗಿದ್ದ ಜೋಪಡಿ

ಹುಲ್ಲಿನೆಳೆಗಳಲಿ
ಬಿದಿರ ಕೊಂಬಿಗೆ
ಆತುಗೊಂಡ ಜೋಪಡಿಯೊಳಗ
ಚುಕ್ಕಿಗಳ ದಿಂಬಾಗಿಸಿದ
ಹೊಂಗೆಯ ನೆರಳಿನ ಗುರುತುಗಳು

ಸಗಣಿಯಿಂದ ಸಾರಿಸಿದ ಪಡಸಾಲಿ
ಮಧುವಣಗಿತ್ತಿಯಂತೆ
ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ
ದಕ್ಕಿಸಿಕೊಂಡ ಅವಳು
ನಡುಮನೆಯ ಮೈದಾನದಾಗ
ನಡುಗಂಬದ ನೆಲೆ

ಬಿರುಕ ಕಿಂಡಿಗಳಲಿ
ಮುರಿದ ಟೊಂಗೆಗಳೆಲ್ಲಾ ಬೆಸೆದು
ಗುಡಿಸಲ ಕಣ್ಣಾಗಿ
ಚಂದಿರನ ಜೋಗುಳ ಕಟ್ಯಾವು
ಗಾಯದ ಬೆನ್ನು ನಿದ್ರಿಸಲು

ಮಳೆಯ ರಭಸದಲಿ
ಕೆರೆಯಂತಾಗುವ ಜೋಪಡಿಯೊಳಗ
ಎಳೆಯ ರೆಕ್ಕೆಗಳನು
ಪಕ್ಕೆಲುಬಲಿ ಅವಿತುಕೊಂಡು
ಬೆಚ್ಚನೆಯ ಬರವಸೆ ತುಂಬ್ಯಾಳೊ ನಾಳೆಗಾಗಿ

ಗಿಜಿಗುಡುವ ಕೆಸರು ರಸ್ತೆಯ ನಡುವೆ
ಗೋಣಿಚೀಲದ ಸೆಲೆಯಾಗಿ
ನೆತ್ತಿಯ ಮೇಲೆ
ಮುಳ್ಳಿನ ಹೊರೆ ಹೊತ್ತಳು ಕರುಳು ಬಳ್ಳಿಗಾಗಿ
ಈ ಜೋಪಡಿಯ ಪ್ರತಿ ಗರಿಗಳಲು
ಅವಳ ಬೆವರಿನ ಬಡಿತಗಳು
ಕಾಲದ ಸೆಳೆತ ದೂಕ್ಯಾವು
ಕೌದಿಯ ನೆರಿಗೆಳಲಿ

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ