Advertisement
ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಗಾಳ ಹಾಕಿ ಕೂತ ಮನಸು…

ಗಾಳ ಹಾಕಿ ಕೂತ ಮನಸ
ಜಾಳು ಜಾಳು ಬಲೆಯ ತುಂಬ
ಸಿಕ್ಕ ನೆನಪುಗಳು ವಿಲ ವಿಲ

ಪರ್ವತಗಳು ಪುಡಿಯಾಗಿ ಸಿಡಿದು
ಹಡೆದ ಮರುಭೂಮಿಯಲ್ಲಿ
ಸೂರ್ಯ ಉರಿದು ಕರಗಿ
ನಡುಗಿ ಇಳಿಯುತಿರುವಲ್ಲಿ
ಕಡುಗಪ್ಪು ಬಣ್ಣದ ವೃತ್ತ
ಭುವಿಯ ಕುದಿಯೆಲ್ಲ ಉಕ್ಕಿ
ರಂಧ್ರಗನ್ನಡಿ ಕೊರೆದು ಕಣ್ಣೀರಿನಲಿ
ಸೃಷ್ಟಿಸಿದಂತಹ ಪುಟ್ಟ ಕೊಳ
ಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲ
ದಂಡೆಯಿರದ ತೀರ
ಬೇರೊಂದು ಲೋಕಕ್ಕೆ ಒಯ್ಯಲು
ತೆರೆದಂತೆ ಬಾಗಿಲಾಗಿ ಕರೆವಲ್ಲಿ
ತಲೆ ಮೇಲೆತ್ತಿ ನೋಡಲು
ಆಗಸದಲಿ ಮೋಡ, ತಾರೆಗಳಿಲ್ಲ

ಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆ
ತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆ
ದಶಕಗಳಿಗೂ ಮುಂಚೆ
ಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿ
ಒಂದು ಬಾಗಿ ನನ್ನ ತಲೆ ಸವರಿದಂತೆ
ಹಿಡಿದು ಬಿಡಲು ಸೆಣೆಸುತ್ತೇನೆ
ಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತು
ಆತಿಡಿದು ಜೋತುಬೀಳಲು ಮನಸಿನಲಿ
ಕನಸುಗಳು ಗೂಡು ಕಟ್ಟಲಾಗಲಿಲ್ಲ

ಮತ್ತೇನೋ ತಡಕುತ್ತದೆ ಬಹು
ಆಳದ ತಳದಲ್ಲಿ ಭಾರೀ ತೂಕದ ವಸ್ತು
ಅದರ ನೆನಪೆಲ್ಲ ಹೇಳುವುದು ದುಃಖದ
ಕತೆ, ಅಳಲು, ಅಸಹಾಯಕತೆ
ಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿ
ಒಳಗಿಳಿದು ನೋಡಿದರೆ ನನ್ನದೇ ಕಥೆ

ಹೋಗಿ ಸೇರಲು ರಸ್ತೆ ಕಡಿದು
ಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ
-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿ
ಕತ್ತಲು ಸೂರ್ಯನ ಕರಗಿಸಿ
ಬಾನನ್ನು ತಿಂದು ತೇಗಿ
ಪ್ರೇತದಂತಹ ಚಂದ್ರನ ತೂಗುಬಿಟ್ಟಿದೆ

ಗಾಳವನು ಸರಕ್ಕನೆ ಎಳೆದು ತಲೆಯೆತ್ತಿ
ದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿ
ಗಾಳವೆಸೆದು ಕೂರುತ್ತೇನೆ ಮತ್ತೆ
ಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?

ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ….

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

3 Comments

  1. ಶ್ರೀಧರ ಜಿ

    ನಿಮ್ಮ ಬರವಣಿಗೆಯ ಶೈಲಿ ಚೆನಗಿದೆ ಮೇಡಂ
    ಈಗೆ ನಿಮ್ಮ ಕವನಗಳು ಮತ್ತು ಕಥೆಗಳು ನಮಗೆ ಸಿಗುವಂತಾಗಲಿ ಧನ್ಯವಾದಗಳು ಮೇಡಂ

    Reply
    • premalatha basavarajaiah

      ಧನ್ಯವಾದಗಳು ಶ್ರೀಧರ್‌ ಅವರೆ.

      Reply
    • premalatha basavarajaiah

      ಬಹಳ ಧನ್ಯವಾದಗಳು 🙂

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ