Advertisement
ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

ದೀಪ ಬೆಳಗಬೇಡ

ನನ್ನೀ ಸುಗಂಧದ ಹಿಂದೆ
ಉಸಿರಾಡಲಾಗದ ಗಬ್ಬುನಾತವಿದೆ
ಕೊಳೆಯಾದ ಅಂಗಿಗಳು
ಕಲೆಯಾದ ಅಂಗಗಳು
ಚಂದ್ರನಿರದ ರಾತ್ರಿಗಳಲ್ಲಿ ಮಾತ್ರ
ಹೊಳೆಯಬಲ್ಲವು;
ರಾತ್ರಿ ಬೀದಿ ದೀಪ ಉರಿಸಬೇಡ
ಕೊಳೆಯ ಒಳಗಿಂದ ವಾಸನೆ ಹಬ್ಬೀತು.

ಕಾರ್ಖಾನೆಯ ಜಿಡ್ಡು
ಒರೆಸಿಕೊಂಡಮೇಲೂ ಅಂಟೆನ್ನಿಸಿದೆ
ಸೋಪು, ನೀರು, ರಾಸಾಯನಿಕಗಳು
ತೊಳೆದು ಕಪ್ಪಾಗಿ ಹರಿಯುತ್ತಿವೆ
ದಯವಿಟ್ಟು ಟಾರ್ಚ್ ಬಿಡಬೇಡ
ಚರ್ಮದ ರಂಧ್ರದೊಳಗಿನ ಕೊಳೆ
ಹೆದರಿ ಅಡಗಿಕೊಳ್ಳುತ್ತದೆ.

ಕಾಲಿಗಂಟುವ ಕೆಸರು
ಚೀಲಕಂಟುವ ಧೂಳು
ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.

ನಿದ್ರೆಯೊಳಗಿನ ಕನಸುಗಳಲ್ಲಿ
ಬೆಳಕು ಬಿದ್ದ ವಸ್ತುಗಳೆಲ್ಲ
ಹಳೆಯದರಂತೆ ಕಳೆಗುಂದಿವೆ,
ಇಷ್ಟಕ್ಕೆಲ್ಲ ಹೆದರಿ ಬೆಚ್ಚಿದರೂ
ಕಣ್ತೆರೆಯಬೇಡ
ನಮ್ಮ ಬೆತ್ತಲೆಯೇ ನಮಗೆ
ತೊಳೆಯದ ಉಡುಗೆಯಂತೆ ಕಂಡೀತು.

ಒಂದು ಹುರುಪಿನಲ್ಲಿ

ಕಂಗೆಟ್ಟ ನನ್ನ ಈ ಇರುಳು
ನಿನ್ನ ಪ್ರೀತಿಯ ಹುರುಪಿನಲ್ಲಿ
ಕರಗುತ್ತದೆ

ಕತ್ತಲೆಯ ಏಳುಬೀಳು
ಸಿಡಿದು ಚೂರಾಗಿ ಮರುಗುತ್ತದೆ

ಪಠಿಸುವ ಮಂತ್ರದಂತೆ
ಗೋಚರಿಸುವ ನಿನ್ನ
ಮಾತಿನ ಕೋನಗಳಲ್ಲಿ
ಕತ್ತಲೆಯೂ ಬೆಳಕಿನಂತೆ
ಮೆರೆಯುತ್ತದೆ

ವಿಚಾರಿಸದೆಯೇ ಅವತರಿಸುವ
ನಿನ್ನ ಅವಯವಗಳ ಸ್ಪರ್ಷದಲ್ಲಿ
ಕತ್ತಲೆಯ ವಿಕಾರವೂ ಮುಗಿಯುತ್ತದೆ

ನಾನು ಪ್ರಶ್ನಿಸಲು ತತ್ತರಿಸುವ
ನಿನ್ನ ಉತ್ತರಗಳ ಹೊತ್ತಿಗೆ
ಹಗಲಿನ ಕುರುಹು ಹೊರಡುತ್ತದೆ

ವಿಭಜಿಸಲಾಗದ
ಆತ್ಮ ದೇಹಗಳಲ್ಲಿ
ಪ್ರೀತಿಯ ಹುರುಪು ಹೊಕ್ಕು
ಹೊಸ ಪರಿಮಳವೊಂದು ಹರಡುತ್ತದೆ.

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ