Advertisement
ಜಿ.ಪಿ. ಬಸವರಾಜು ಬರೆದ ಈ ದಿನದ ಕವಿತೆ

ಜಿ.ಪಿ. ಬಸವರಾಜು ಬರೆದ ಈ ದಿನದ ಕವಿತೆ

ಭೈರವಿ*

ಅವರು ಹಾಡುತ್ತಲೇ ಇದ್ದರು, ಆಲಾಪ
ಮುಗಿಸಿ, ಧೃತಗತಿಗೆ ನಡೆದು, ತಾನ್ಗಳ
ತೂಗುಯ್ಯಾಲೆಯಲ್ಲಿ ತೂಗಿಕೊಳ್ಳುತ್ತ
ಹಾಡುತ್ತ ಹಾಡುತ್ತ ಮರೆತಿದ್ದರು ಎಲ್ಲ;

ಕೇಳುವವರಿದ್ದರು ಅವರ ಜೊತೆಯಲ್ಲಿಯೇ,
ಮೈದುಂಬಿ ಹಾಡುವುದು, ಮನದುಂಬಿ
ಕೇಳುವುದು, ತುಂಬಿ ತುಂಬಿ ತುಳುಕುವುದು
ಗಾಳಿಯಲಿ ತೇಲುತ್ತ, ಹಗುರ ಚಿಟ್ಟೆಯ ರೆಕ್ಕೆಗಳ
ಮೇಲೆ ಕುಳಿತು ಸಾಗುತ್ತ ಸಾಗುತ್ತ, ಚಂದ್ರನ
ಮುಟ್ಟಲು ಮತ್ತೆ ಮತ್ತೆ ಮೇಲೆ ಮೇಲೆ ಜೀಕುತ್ತ;

ಅಮಲಿನಲಿತ್ತು ಸುತ್ತಲಿನ ಲೋಕ
ಮಧುಪಾತ್ರೆಯ ಹಿಡಿದು ಇಷ್ಟಿಷ್ಟೆ
ಹಂಚುತ್ತ, ತಾನೆ ತೊನೆದಾಡುತ್ತ
ನರ್ತಿಸುವ ನೃತ್ಯಗಾತಿಯ ಹಾಗೆ
ಹಾಡುತ್ತಿದ್ದರು ಅವರು-ಲೋಕವೇ
ನರ್ತಿಸುವಂತೆ, ಹಾಡುತ್ತಿದ್ದರು
ಅವರು- ಮೂರು ಲೋಕಗಳು
ಬೆರಗಾಗಿ, ಮಾತಿಲ್ಲದೆ ಗರಬಡಿದು
ನಿಂತಂತೆ

ಭೈರವದ ಕೊನೆಯ ಮಜಲಿಗೆ ಏರಬೇಕಿತ್ತು
ಎಲ್ಲ ತೊರೆದು ನಿಂತ ಭೈರಾಗಿಯ
ಮುದ್ರೆಗಳ ಮೂಡಿಸಬೇಕಿತ್ತು ಅವರು,
ಆ ರಾಗ, ಆ ವಿರಾಗಿಯ ಮುಟ್ಟಿಮುಟ್ಟಿ
ಮಾತನಾಡಿಸುತ್ತಿತ್ತು; ಮರೆವು-ಎಚ್ಚರಗಳ
ನಡುವೆ ತೂಗುವ ಉಯ್ಯಾಲೆ ಅದು,
ಏರುವುದು ಇಳಿಯುವುದು.
ಮೈತಿಳಿಯುವುದು, ಮರೆಯುವುದು
ಎಳೆಎಳೆಯ ಜೋಡಿಸಿ ಹಾಸು-ಹೊಕ್ಕುಗಳಲಿ
ಹಾದು, ಹೊಕ್ಕುಳಬಳ್ಳಿಯ ಬೆಸೆದು ನೇಯುವ
ಆಟ
ಎದೆಯಾಳದಿಂದ ಸ್ವರಗಳ ಹೊಮ್ಮಿಸುವ
ಮಾಟ,
ಬಂತು ಬಂತು ಇನ್ನೇನು ಬಂದಿಳಿಯಿತು
ಎನ್ನುವಾಗಲೇ ಥಟ್ಟನೆ ಕಡಿದುಬಿಟ್ಟಿತು
ಎಳೆ,
ನಿಂತುಬಿಟ್ಟಿತು ಗಾನ; ನೆಲಕ್ಕೊರಗಿತು
ರಾಗ, ಬೈರಾಗಿ ಬಿದ್ದ
ಬಾನಿಂದ ಬುವಿಗೆ;
ಎಲ್ಲ ಮುಗಿದಿತ್ತು ವೈಭವ
ಭವ ಭವ

***

*ಹಾಡುತ್ತ ಹಾಡುತ್ತಲೇ ಕೊನೆಯುಸಿರು ಎಳೆದ ಮಹಾನ್ ಗಾಯಕರಿಗೆ ಈ ಕವಿತೆ.

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ