Advertisement
ಬಿ.ಆರ್. ಲಕ್ಷ್ಮಣ ರಾವ್ ಬರೆದ ಎರಡು ಹೊಸ ಕವಿತೆಗಳು

ಬಿ.ಆರ್. ಲಕ್ಷ್ಮಣ ರಾವ್ ಬರೆದ ಎರಡು ಹೊಸ ಕವಿತೆಗಳು

ರಾಜ ತರಂ’ಗಿಣಿ’

ಪಂಜರದಲ್ಲಿದೆ ಒಂದು ಅರಗಿಣಿ.
ಯಾರೋ ಕಲಿಸಿದ ಮಾತು,
ಕೊಟ್ಟ ಕುಮ್ಮಕ್ಕು.
ಕಂಬಿಗೆ ತಲೆ ಚಚ್ಚಿಕೊಳ್ಳುತ್ತ,
ಅದರದ್ದೊಂದೇ ವರಾತ:
“ಬಿಡಿ ನನ್ನ ಹೊರಕ್ಕೆ,
ನನ್ನ ಪಾಡಿಗೆ ನಾನು
ಸ್ವಚ್ಛಂದ ಹಾರಾಡಲಿಕ್ಕೆ”

ಹೊರಗೆ ಹೊಂಚಿ ಕೂತಿದೆ
ಒಂದು ಮಾಳ ಬೆಕ್ಕು
ಜೊಲ್ಲು ಸುರಿಸುತ್ತ:
“ಬಾ ಹೊರಕ್ಕೆ, ನನಗೆ ಸಿಕ್ಕು,
ಗಬಕಾಯಿಸ್ತೀನಿ ಒಂದೇ ಗುಕ್ಕಿಗೆ”

ಮೊದಲು ಮೈತುಂಬ ಬರೆ ಹಾಕಬೇಕು
ಆ ಖೂಳ ಬೆಕ್ಕಿಗೆ.
ಒದ್ದೋಡಿಸಬೇಕು, ಇನ್ನೊಮ್ಮೆ ನೋಡದಂತೆ
ನಿನ್ನ ದಿಕ್ಕಿಗೆ.
ಆಮೇಲೆ ಹಾರಾಡುವೆಯಂತೆ
ನಮ್ಮ ಮನೆ ತುಂಬ
ಮನೆವಂದಿಗಳಾಗಿ.

ಅಲ್ಲಿಯ ತನಕ ಕೊಂಚ ತಾಳೇ,
ಅರಗಿಣಿಯೇ,
ಇದು ನಿನ್ನ ಒಳಿತಿಗಾಗಿಯೇ,
ನೀ ತಿಳಿಯೇ.

“ಹಾಗಾದರೆ, ಅಯ್ಯಾ,
ನಾನು ನಿಮ್ಮ ಈ ಪ್ರತಿಷ್ಠೆಯ ಆಟಕ್ಕೆ
ಕಾದಾಟಕ್ಕೆ
ಒಂದು ದಾಳವಾಗಿಯೇ
ಉಳಿಯಬೇಕೆನ್ನುವೆಯಾ?”
ಕೇಳಿತು ಪಂಜರದೊಳಗಿಂದ ಅರಗಿಣಿ,
ಸುರಿಸುತ್ತ ಕಂಬನಿ.

******

ಮೇಲಿನವರು

ಮಂದಿ ಘೋಷಣೆ ಚೀರಿದರು
ಮೇಲಿನವರು ಹೇಳಿದರೆಂದು.
ಮಂದಿ ಕಲ್ಲು ತೂರಿದರು
ಮೇಲಿನವರು ಹೇಳಿದರೆಂದು.
ಪೋಲೀಸರು ಗುಂಡು ಹಾರಿಸಿದರು
ಮೇಲಿನವರು ಹೇಳಿದರೆಂದು.
ಆ ಮೇಲಿನವರು ಹೇಳಿದರು
ತಮ್ಮ ಮೇಲಿನವರು ಹೇಳಿದರೆಂದು.
ಆ ಮೇಲಿನ ಮೇಲಿನ ಮೇಲಿನವರು ಹೇಳಿದರು
ಆಕಾಶಕ್ಕೆ ಕೈ ತೋರಿ
ಆ ಮೇಲಿನವನು ಹೇಳಿದನೆಂದು.
ಆ ಮೇಲಿನವನೋ ಕಕ್ಕಾಬಿಕ್ಕಿ
ತಾನು ಯಾರನ್ನು ತೋರುವುದೆಂದು!
ಯಾರನ್ನು ದೂರುವುದೆಂದು!!

 

(ಬಿ.ಆರ್. ಲಕ್ಷ್ಮಣ ರಾವ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ