Advertisement
ವಾಸುದೇವ ನಾಡಿಗ್ ಬರೆದ  ಕವಿತೆ

ವಾಸುದೇವ ನಾಡಿಗ್ ಬರೆದ ಕವಿತೆ

ಚರಕ ನಿಲ್ಲದು, ನೂಲು ಮುಗಿಯದು

ಕಪ್ಪು ಮಣ್ಣಿಂದ ಮೂಡಿದ್ದು ಬಿಳಿ
ಮೈಗಳ ಅಳೆಯಲಿಲ್ಲ ಒಪ್ಪಿಕೊಂಡಿತು
ಹತ್ತಿ ಹತ್ತಿಕೂತಿತು
ಬಾಪೂ ನೂಲಿಗೆ ಸವರಿದ್ದು ಸಹನೆ
ಬೆರಳುಗಳು ದಣಿಯಲಿಲ್ಲ
ತಗ್ಗಿಸಿದ ಕೊರಳು ಸುಕ್ಕ ಎಣಿಸಲಿಲ್ಲ
ನೆಲದಿಂದ ಎದ್ದ ಎಳೆಗಳ ನೆಲಕ್ಕೆ
ಬಿಗಿವ ಬಂಧ
ಬಣ್ಣ ಬಳಿದುಕೊಂಡು ಮೆರೆದರೂ
ಹೊಮ್ಮಿದ ನೂಲುಗಳಿಗೆ
ಕಪ್ಪು ಬಿಳಿಯ ನಡುವೆ ದೇಶ ಹೆಣಿಗೆ
ಚರಕ ತಿರುಗುತ್ತಿದೆ

ಮತ್ತದೆ ತುಟಿ ಶ್ರುತಿಪೆಟ್ಟಿಗೆ
ರಾಘವ ಅಲ್ಲಾಹ್ ಶಿವ ನೂಲಿನೆಳೆ
ಹರಿದು ಹೋದ ಜನವ ನೇಯ್ಗೆ ಕನಸು
ಹೊದೆದದ್ದೂ ಸೈರಣೆ ಹಾಸಿದ್ದೂ ಕರುಣೆ
ತಿರುಗಿ ತಿರುಗಿಸಿದ್ದೆಲ್ಲ ನೆಲದ ಚಿಂತೆ
ನೂಲ ಕಲಿಸಿದ,ಉಡಲಿಲ್ಲ
ಶಾಂತಿ ಪಠಿಸಿದ, ಮಲಗಲಿಲ್ಲ
ಅನ್ನ ಬಿತ್ತಿಸಿದ, ಉಣಲಿಲ್ಲ
ಮುಳ್ಳ ಸವರಿದ, ಹೂ ಕಾಣಲಿಲ್ಲ
ಸುಳ್ಳುಗಳ ಹೇಷಾರವದ ಕೋಣೆಯಲಿ
ಮುಗುಳ್ನಗೆಯ ಪಟಕೆ ಬಿಗಿ ಚೌಕಟ್ಟು
ಚರಕ ತಿರುಗುತ್ತಿದೆ

ಬಿರಿದ ಭೂಮಿ ಬಿಂಬ ಹಿಮ್ಮಡಿ
ಸವೆದ ದಾರಿಯ ಗೆರೆ ಬೆನ್ನಲಿ
ಇರುಳ ಅರಿಯದ ಕಣ್ಣೊಳಗೆ
ನಾಡಿನ ಕ್ಷುಬ್ಧ ಕಡಲು
ಒಡಲು ಕನಲುವ ನಕ್ಷೆ
ಸಂತೆ ಜನರ ಕಾಲ್ತುಳಿತ ಎದೆ
ಒಂದು ಎಲ್ಲರ ನೂಲಲಿ ಪೋಣಿಸಲಾಗದ ನೋವು
ತನ್ನ ಮೋಹಕೆ ದಾಸನಾಗದ
ನೆಲದ ಹಾಡು
ಹೆಣೆದದ್ದು ಸರ್ವಸುಖದ ಬೀಸಣಿಕೆ
ಕಂಡದ್ದು ಕೊಡಲಿ
ಚರಕ ತಿರುಗುತ್ತಿದೆ

ಬಾಪೂ ನಿನ್ನ ಚರಕ ತಿರುಗುತ್ತಿದೆ
ಚರಿತ್ರೆ ಯೊಂದರ ಪರಿವಿಡಿಯಾಗಿ
ವರ್ತಮಾನದ ಕುಹಕಕ್ಕೆ ಸಾಕ್ಷಿಯಾಗಿ

ಒಂದು ನೂಲಲಿ ಎಲ್ಲರ
ಪೋಣಿಸಲಾಗದ ನೋವು
ತನ್ನ ಮೋಹಕೆ ದಾಸನಾಗದ
ನೆಲದ ಹಾಡು
ಹೆಣೆದದ್ದು ಸರ್ವಸುಖದ ಬೀಸಣಿಕೆ
ಕಂಡದ್ದು ಕೊಡಲಿ
ಚರಕ ತಿರುಗುತ್ತಿದೆ

ಬಾಪೂ ನಿನ್ನ ಚರಕ ತಿರುಗುತ್ತಿದೆ
ಚರಿತ್ರೆ ಯೊಂದರ ಪರಿವಿಡಿಯಾಗಿ
ವರ್ತಮಾನದ ಕುಹಕಕ್ಕೆ ಸಾಕ್ಷಿಯಾಗಿ

About The Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ