Advertisement
ಕ್ಷಮಿಸಿ, ನನ್ನದೇನೂ ಇಲ್ಲ: ಸುಧಾ ಆಡುಕಳ ಕವಿತೆ

ಕ್ಷಮಿಸಿ, ನನ್ನದೇನೂ ಇಲ್ಲ: ಸುಧಾ ಆಡುಕಳ ಕವಿತೆ

ಕ್ಷಮಿಸಿ, ನನ್ನದೇನೂ ಇಲ್ಲ

ನಡುರಾತ್ರಿಯಲಿ ಅಮ್ಮ
ಸೆರಗಿನಲಿ ಗಾಳಿ ಹಾಕಿ
ಆರಿಸಿ ಕಳಿಸಿದ ದೀಪಗಳು
ಆಲದ ಮರದಡಿಯಲ್ಲಿ
ಕುಳಿತು ಕಥೆ ಹೇಳುತ್ತಿದ್ದವು
ಹುಣ್ಣಿಮೆಯ ರಾತ್ರಿಯಲಿ
ಅಮ್ಮ ಕಣ್ಮುಚ್ಚಿದಾಗ …….
ಅವಳ ಎದೆಯಲ್ಲಿ ಆರಿದ ದೀಪ
ನನ್ನೊಳಗೆ ಕಥೆಯಾಯಿತು
ಅಮ್ಮ ಆರಿಸಿ ಕಳಿಸಿದ
ಕಥೆ ಹೇಳುವ ದೀಪ ನಾನು!

ಮರ ಹತ್ತುವ ಕಾಯಕದ ಅಪ್ಪ
ಮೇಲೇರಿದಂತೆಲ್ಲ ಬದಲಾಗುವ ಪಾತ್ರಗಳು
ಸೇವಕ, ಮಂತ್ರಿ, ರಾಜ……..
ಮರದ ತುತ್ತತುದಿಯಲ್ಲಿ
ದೇವೇಂದ್ರನ ಒಡ್ಡೋಲಗ!
ಬದುಕಿಗಾಗಿ ಬಯಲಿಗಳಿದ ಅಪ್ಪನ
ದೇವಲೋಕದ ಕನಸು ನಾನು!

ಕೌಶಿಕನಿಗಿಂತ ಶತಪಟ್ಟು ಮೂರ್ಖನ ಕೈ ಹಿಡಿದ ಅಕ್ಕ
ಬಿಟ್ಟು ಬಯಲಾಗು ಬಾರೆ ಎಂದರೆ…
ಕಾಣಲೊಲ್ಲದ ಆ ಶಿವನ ಎಲ್ಲೆಂದು ಹುಡುಕಲೆ?
ಸಿಕ್ಕವನನ್ನೇ ಹಿಡಿದು ಜಂಗಮನನಾಗಿಸುವೆನೆಂಬ
ಹಠದಿಂದ ಹೊರಟವಳು
ಮತ್ತೇನೋ ನೆನಪಾದವಳಂತೆ ಹತ್ತಿರ ಬಂದು
‘ನನ್ನ ಕನಸುಗಳಿವು ಜೋಪಾನ’
ಎಂದು ನನ್ನೆದೆಯೊಳಗೆ ಬಚ್ಚಿಟ್ಟು ಹೋದಳು!

ಹೂವು, ಹಸಿರು, ಚಿಟ್ಟೆ ಚಿತ್ತಾರದ ತಂಗಿ
ಏಳು ಮಲ್ಲಿಗೆ ತೂಕದ ರಾಜಕುಮಾರಿ
ಚಿಪ್ಪಿನಲ್ಲಿ ಬಿಡಿಸಿದ ನವಿಲು ಚೌಕಟ್ಟಿನಲ್ಲಿ ಸ್ಥಬ್ದ!
ನನ್ನೆದೆಯಲ್ಲಿ ಗರಿಬಿಚ್ಚಿ ನರ್ತಿಸುತ್ತಿದೆ
ನಾ ಬಿಡಿಸುವ ಚಿತ್ರ ಚಿತ್ತಾರವವಳು

ಕಂಚು, ಕನ್ನಡಿ, ಕಾಂಚಾಣಗಳನ್ನು
ಕನಸ್ಸಲ್ಲಷ್ಟೇ ಕಾಣುವ ನನ್ನೂರ ಹೆಣ್ಣುಗಳು
ತಮ್ಮ ಕನಸ ಹಾಡುಗಳನ್ನು
ನನ್ನ ಕಂಠದಲ್ಲಿ ಠೇವಣಿಯಿಟ್ಟಿದ್ದಾರೆ
ಬಲು ಆಸೆಯಿಂದ………
ಗಂಡಸರ ಹೆಗಲೇರಿ ಸವಾರಿ ನಡೆಸುವ
ನನ್ನೂರ ಮಾರಿಯ ಹಠವು
ಅಡ್ಡಾಡಿಗಳ ಬಾಯಲ್ಲಿ ರಕ್ತ ಕಾರಿಸಿ
ನಿಜವ ಕಕ್ಕಿಸುವ ನನ್ನೂರ ದೇವಿಯ ಕಸುವು
ನನ್ನೊಂದಿಗೆ ಪಲ್ಲಕ್ಕಿಯಲ್ಲಿ
ಸವಾರಿ ಹೊರಟಿವೆ ಊರಗಲ ತುಂಬ
ಶ್ರಮದ ಕೈಗಳು ಸೇರಿ ಕಟ್ಟಿದ
ನನ್ನೂರ ಪುಟ್ಟ ತೇರು ನಾನು!

ಕ್ಷಮಿಸಿ, ಇಲ್ಲಿ ನನ್ನದೇನೂ ಇಲ್ಲ…

About The Author

ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

1 Comment

  1. Uday

    ಚೆಂದದ ಕವಿತೆ.
    ಮಾಯಕದ ದೀಪ ಹೊಸ ಕತೆಗಳನ್ನು ಸದಾ ಹೊಸೆಯುತ್ತಿರಲಿ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ