Advertisement
ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ: ಕೆನೆಯಾಗಿರುವವಳ ಕಾಣುತ್ತಾ..

ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ: ಕೆನೆಯಾಗಿರುವವಳ ಕಾಣುತ್ತಾ..

ಕೆನೆಯಾಗಿರುವವಳ ಕಾಣುತ್ತಾ..

ಈಕೆ
ಕೆನೆ ಪದರವಾಗಿ ಹರವಿಕೊಂಡು
ಹಾಲನ್ನು ಆವರಿಸಿ ಮುಚ್ಚಿಬಿಟ್ಟಿದ್ದೇನೆನ್ನುತ್ತಿರುವ ಮುಗ್ಧೆ.
ಬರೀ ಕೆನೆ ಎಂದು ಕಾಣಲಾರದ ಕಣ್ಣಿಗೆ
ಹಾಲಿನ ಸಾರವೇ ತಾನಾಗಿ ತೇಲುತ್ತಿದ್ದೇನೆ
ಎನ್ನುವುದನೂ ತಿಳಿಯದ
ಹಾಲು ಮನಸ್ಸು.

ಈ ಹಾಲಿಗೊಂದು ಕನವರಿಕೆ ಇದೆ.
ಮೊದಲು ಕಾವು
ಕಾವಾಗಿ ತಿಳಿಯದೆ ಬೇಗ ಆರುತ್ತಿದ್ದಾಗ
ಕೆನೆಯಾಗಿ ಈಸು ಬಿದ್ದು ತೇಲುತ್ತಿದ್ದ ಕಾಲ ಮುಗಿದು
ಲೋಕಾರೂಢಿಯ ನಂಟಿಗೆ
ಹೆಪ್ಪಾಗಿ ಮೊಸರಾದವಳು ಈಕೆ.
ನಂತರ ಮಂಥನ.
ಯಾರು ದೇವರಾದರೊ ರಕ್ಕಸರಾದರೊ..
ಮುಂದಕ್ಕೆ
ಅಮೃತ ಉಕ್ಕಲಾರದು ಎನುವ ಖಾತರಿಯಲ್ಲೇ
ಹಾಲಾಹಲವೂ ಬೇಡ ಎಂದಿರಬೇಕು ಇವಳು.

ಮೊಸರಾಗಿ ಕದಡಿಹೋದ
ಮನಸ್ಸನ್ನ ತನ್ನ ಧೀಶಕ್ತಿಯಿಂದ
ಹಿಮ್ಮುಖದ ಪ್ರಕ್ರಿಯೆಗೆ ಒಗ್ಗಿಸಿ
ಮತ್ತೆ ಹಾಲಾದವಳು.
ಹಿಂದಿನ ಮಥನದ ನೆನಪನ್ನು
ಕೆನೆಯ ಹೊದಿಕೆಯಡಿ
ಅಡಗಿಸಿಡುತಿರುವವಳು.

ಒಳಗೆ ಮಥನದ ಅಲೆಗಳು ನಿಂತಿಲ್ಲ.
ಹೊರಗೆ ಈಕೆ
ಸಕಲೆಂಟು ಕೆಲಸಗಳಲಿ
ಮುಳುಗಿ ಒದ್ದೆಯಾದರೂ
ಮೇಲಷ್ಟೇ ತೇವ
ಒಳಗೆ ಕಾವು.

ಕಾವನ್ನು ನಗುವಿನಲ್ಲಿ
ಅಡಗಿಸಲು ಎಣಿಸುತ್ತಾಳೆ
ಕಣ್ಣಿನಲಿ ಹೊಳಪು ಕಾಣಿಸಲು
ತುಡಿಯುತ್ತಾಳೆ..
ಏನಾದರೊಂದು ಕೃತಿ ರೂಪಕ್ಕೆ ತರುವಾಗ ಮಾತ್ರ
ಇವಳ ಮನಸಿನ ಸಾರ
ಕೆನೆಯಾಗಿ ತೇಲುತ್ತದೆ.

ಅದು ಪದವಾಗುತ್ತದೆ, ಸಾಲಾಗುತ್ತದೆ
ಒಂದು ಚಿತ್ರವಾಗುತ್ತ ಪ್ರಶ್ನೆಯಾಗುತ್ತದೆ.
ಪ್ರಶ್ನೆಗಳು ತಂತಾನೇ ಜೋಡಿಸಿಕೊಂಡು
ಕಲ್ಲುಗಳಾಗಿ ಕೋಟೆಯಾಗುತ್ತವೆ.
ಕೋಟೆಯೊಳಗೆ ಆಡಳಿತ
ನಡೆಸುತ್ತೇನೆನ್ನುವಾಗ ಮಾತ್ರ
ಮನಸಿನ ಪ್ರತಿರೂಪ ಮತ್ತೆ
ಕೆನೆಯ ರೂಪದಲಿ ಕಾಣುತ್ತದೆ.

ಹಾಲು
ಬೆಳ್ಳಗೆ ಬೆಳಕು ಹಾಯಿಸಿದಂತೆ ಮಾತಾಡಿ
ತಾನು ಮೊಸರಾಗಿ ಕದಡಿದ ಕಥೆ
ಹೇಳುವವರೆಗೂ
ತೇಲುತ್ತಿರುವುದು ಕೆನೆ ಮಾತ್ರ
ಅಂತ ನಟಿಸುತ್ತ ನಗುತ್ತ
ಇರಬೇಕು ನಾನು..
ಇದು ಸೋಜಿಗ ಹಾಗೇ ಒಂದು ಆಟ…

About The Author

ಎನ್.ಸಿ. ಮಹೇಶ್

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ 'ಕನ್ನಡ ಪ್ರಭ' ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. 'ಬೆಳಕು ಸದ್ದುಗಳನ್ನು ಮೀರಿ', ' ಸರಸ್ವತಿ ಅಕಾಡಮಿ' (ಕಥಾಸಂಕಲನ) ' ತಮ್ಮ ತೊಟ್ಟಿಲುಗಳ ತಾವೇ ಜೀಕಿ' (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ 'ಡ್ರಾಮಾಟ್ರಿಕ್ಸ್' ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ