Advertisement
ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ: ನಿದ್ದೆಹೋಗುವ ಮುನ್ನ

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ: ನಿದ್ದೆಹೋಗುವ ಮುನ್ನ

ನಿದ್ದೆಹೋಗುವ ಮುನ್ನ

ಹಿತ ಚಳಿ ನೇವರಿಸುವ
ಮಸಿಕತ್ತಲೊಂದು ಸಡಗರ

ಮಡಿವಾಳಹಕ್ಕಿಯ ನೀಳ
ಸಿಳ್ಳುಗಳು ಬೀಳ್ಕೊಟ್ಟ
ಸಂಜೆಯಿಳಿಯುತ್ತಿದ್ದಂತೆಯೇ
ಒಳಗೆಲ್ಲ ತುಂಬಿ ಹರಿವ
ಕತ್ತಲು- ಸಾವಿರದೊಂದು ಚುಕ್ಕಿ
ಕಪ್ಪೆ ಗೂಬೆ ನಾಯಿಗಳ ಗೊಣಗುವಿಕೆ
ಗೂಡೊಳಗೆ ನಾಳಿನ ಕಂದನಿಗೆ
ಕಾವುಕೊಡುವ ಸೂರಕ್ಕಿ ಜೋಡಿ

ಅಡುಗೆಗೊಂದು ರುಚಿ, ಆಪ್ತರ
ಮಾತಿಗೊಂದು ಘಮ ಮಗನ
-ನೇವರಿಕೆಗೊಂದು ಉಮೇದು
ಬೆಕ್ಕಿಗೊಂದು ಅಪ್ಪುಗೆ- ಇರುಳ
ಹೆಜ್ಜೆಗೆ ನನ್ನ ಗೆಜ್ಜೆ

ಊಟ ಕಸ ಮುಸುರೆ
ಕವಿತೆಯೊಲವು ಓದು
ಮುಗಿದರೂ, ದಣಿವು ತುಂಬಿದರೂ
ಮಲಗಲೊಲ್ಲದು ಜೀವ
ಅಗಲಲಾರದು ಕತ್ತಲ ಜಗವ

ಇನ್ನೂ
ಜೀರುಂಡೆ ಬಾವಲಿ ಮಾತಿಗೆ
ತಲೆದೂಗುತ್ತ ತಂಗಾಳಿಯ
ಹೀರಿ ಹೀರಿ ಕುಡಿಯಬೇಕು
ಅರೆಬಿರಿದ ಮೊಗ್ಗುಗಳ ಕಾಣುತ್ತ
ಆಯಾಸಗಳ ದೂಡಿಬಿಡಬೇಕು
ಪಾದಕ್ಕೆ ಎಣ್ಣೆ ಸವರಿ
ಕೂದಲ ಸಿಕ್ಕು ಬಿಡಿಸಿ
ಗುಳಿಗೆ ನುಂಗಿ
ಕಣ್ಣಿಗೆ ಕತ್ತಲೂಡಿಸಿ
ದೀಪವಾರಿಸಲೇ
ಚಳಿಯಿದೆ ಹೊದಿಕೆ ತಾ
ಪಕ್ಕದ ಕೋಣೆಗೆ ಹೋಗಿ ಬಾ….
ಅಂತೂ ಚಾದರಗಳ ಜೋಡಿಸಿ
ಕಿಟಕಿಪರದೆ ಸರಿಸಿ ಸಿಕ್ಕಿಸಿ
ಎಲ್ಲ ಸರಿಯಾಗಿದೆಯೇ
ದೀಪವಾರಿಸಲೇ ….
ಹತ್ತನೇ ಸಲ!
ಆಗಲೇ ಒಂದೂವರೆ
ಉಫ್!
ಹೂವಂತೆ ಮಲಗು
ನಿರಾಳ ಕತ್ತಲು!

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು.
ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು.
ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ