Advertisement
ಶರೀಫ್ ಕಾಡುಮಠ ಬರೆದ ಕವಿತೆ ಉರೂಸ್

ಶರೀಫ್ ಕಾಡುಮಠ ಬರೆದ ಕವಿತೆ ಉರೂಸ್

ಉರೂಸ್

ಅಲ್ಲಿ ಉರೂಸು
ರಾತ್ರಿ ಬಣ್ಣದ ಬೆಳಕಿನಲಿ
ಹೊಳೆವ ದರ್ಗಾದಂಗಳದ
ಪಕ್ಕದಲಿ
ಮಿಠಾಯಿ ಹಲ್ವಾ ಸಂತೆ
ಪ್ರಭಾಷಣದ ವಿಷಯ
‘ದಾರಿ ತಪ್ಪುತ್ತಿರುವ ಯುವಜನಾಂಗ’

ಹಿಜಾಬಿನವಳ
ಸುರ್ಮಾ ಹಚ್ಚಿದ ಕಣ್ಣ ನೋಟಕ್ಕೆ
ಸಂತೆ ಗದ್ದಲದೊಳಗೇ ನಿಂತೆ
ನನ್ನ ದೂಡಿ ಸಾಗುವ ಜನಗಳು
ಓಡಿ ಆಡುವ ಮಕ್ಕಳು
ಕಿವಿಗಪ್ಪಳಿಸುವ ಉಸ್ತಾದರ ಪ್ರಭಾಷಣದ
ಅದೇ ಹಳೇ ಶೈಲಿಯ ರಾಗ

ಮೊದಲ ನೋಟಕ್ಕೇ
ಫಿದಾ ಆಗಿ
ಖುದಾನ ಬಳಿ
ಮೊಹಬ್ಬತ್ತಿನ ಮೊರೆಯಿಟ್ಟಿದ್ದೇನೆ
ಭಾಷಣದ ವೇದಿಕೆ ಮುಂದೆ
ಬಿಳಿಗೂದಲ ಹಲ್ಲಿಲ್ಲದ
ಉಪ್ಪಾಪಗಳು ಸಾಲಾಗಿ
ಕಿವಿ ಹಿರಿದಾಗಿಸಿ
ಮುದುಡಿ ಕುಳಿತಿವೆ

‘ಅನ್ಯ ಸ್ತ್ರೀಯನ್ನು ನೋಡಬಾರದು
ಅವರಲ್ಲಿ ಮಾತಾಡಬಾರದು
ಎಂದು‌ ಉಸ್ತಾದರ ದನಿಯಿಂದ ಹೊರಟ
‘ಪಾಡಿಲ್ಲಾ…..’ಗಳ ಉದ್ದಪಟ್ಟಿ
ಕಿವಿಯೊಳಗೆ ಅಟ್ಟಿಯಾಗುತ್ತಲೇ ಇವೆ
ಅವಳೂ ಆಗಾಗ ಕಣ್ಣ ಮುಂದೆ
ಬರುತ್ತಾಳೆ ನನ್ನ‌ ನೋಡಲೆಂದೆ

ಹಲ್ವಾ ಮಿಠಾಯಿಗಳೆಲ್ಲ
ಸವಿ ಇಲ್ಲದಂತೆನಿಸಿ
ಅವಳೆದುರೆಲ್ಲವು ಸೋತಂತೆನಿಸಿ
ಸುಂದರ ಕನಸಿನ ಸ್ವರ್ಗದಲಿ ತೇಲಲು
ಮನದ ಹೆಜ್ಜೆಯನೂರಲೆಂದು
ಹೊರಡುತ್ತೇನೆ
ನರಕಾಗ್ನಿಯ ಬಿಸಿ ತಾಪದ
ಭೀಭತ್ಸ ವರ್ಣನೆ ಮಾಡುತ್ತಿದ್ದಾರೆ
ಉಸ್ತಾದರು

ಕಾಲು ಜಾರಿದಂತೆ
ಹಿಂದೆ ಯಾರೋ ದೂಡಿದಂತೆ
ಮುಂದೆ ಸಾಗುತ್ತೇನೆ
ನೋಟ ಬೆರೆಸಿದ ಅವಳ ಕಣ್ಣು
ಸಾವಿರ ಕನಸಿನ ಕತೆ ಹೇಳುತ್ತದೆ
ನಾಳೆ ಬಂದೇ ಬರುತ್ತಾಳೆ
ಒಂದು ವಾರದ ಉರೂಸಿನಲಿ
ಅವಳು ಸಿಕ್ಕೇ ಸಿಗುವಳು
ಮತ್ತೆ ಮತ್ತೆ

ಪ್ರಭಾಷಣ ಮುಗಿದಿದೆ
ಸಂಚಾಲಕ ಉಸ್ತಾದರ ಕಿಸೆಗೆ
ನೋಟುಗಳ ಸುರುಟಿ ಹಾಕಿ
ಕೈ ಚುಂಬಿಸಿ ಕಾರಿಗೇರಿಸಿ
ಕಳುಹಿಸಿದ್ದಾನೆ

ಎರಡು ವರ್ಷ ಕಳೆದ ಮೇಲೆ
ಮತ್ತೆ ಉರೂಸಾಗುತ್ತದೆ
ಮತ್ತದೇ ಉಸ್ತಾದರೂ ಬರುತ್ತಾರೆ
ಪ್ರಭಾಷಣದ ವಿಷಯ
‘ದಾರಿ ತಪ್ಪುತ್ತಿರುವ ಯುವಜನಾಂಗ’
ನಾನೂ ಅವಳೂ
ನಮ್ಮ ಕಂದನ ಜತೆಗೆ
ಉರೂಸಿಗೆ ಹೋಗುತ್ತೇವೆ

ಷರೀಫ್‌ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದಾರೆ
‘ಕನಸಿನೂರಿನ ದಾರಿ’ ಪ್ರಕಟಿತ ಕವನ ಸಂಕಲನ
ಓದು, ಬರಹ, ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ಸದ್ಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. M Ranjith Mourya

    ಎಂಎಸ್ಕೆ ಯುವ ಕವಿಗಳಿಗೆ ನನ್ನ ನಮಸ್ಕಾರಗಳು
    ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ.
    ನನ್ನ ಗೆಳೆಯ ಒಡನಾಡಿ ಎಂಬುವುದು ನನಗೆ ಹೆಮ್ಮೆ..
    ಒಳ್ಳೆಯದಾಗಲಿ.

    Reply
  2. Rajalakshmi

    ಉತ್ತಮ ಕವನ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ