Advertisement
ರಾಮಚಂದ್ರ ಕೊಟ್ಟಲಗಿ ಕಾವ್ಯ ಕುಸುಮ: ಲೀಲೆ

ರಾಮಚಂದ್ರ ಕೊಟ್ಟಲಗಿ ಕಾವ್ಯ ಕುಸುಮ: ಲೀಲೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮನಗೂಳಿಯವರಾದ ರಾಮಚಂದ್ರ ಕೊಟ್ಟಲಗಿ ಅವರು, ಕಾದಂಬರಿ, ಕಾವ್ಯ ಮತ್ತು ವಿಮರ್ಶೆಯ ಕೃತಿಗಳನ್ನು ಬರೆದಿದ್ದಾರೆ. ಅವರು ಬರೆದ ಮೊದಲ ಕಾದಂಬರಿ ದೀಪನಿರ್ವಾಣ. ‘ದೀಪ ಹತ್ತಿತು’ ಇದರ ಎರಡನೆಯ ಭಾಗ. ‘ವಿಲಾಪಿಕಾ’, ‘ವೈನಿ ಸತ್ತಾಗ ನಾನ್ಯಾ ಅತ್ತಾಗ’ ಮತ್ತು ‘ನಾನು ಬಾಳ್ಯಾ ಜೋಶಿ’ ಇನ್ನಿತರ ಕಾದಂಬರಿಗಳು. ಪಿಪಾಸೆ ಮತ್ತು ಪ್ರತಿಮಾ ಅವರು ಬರೆದ ಕವನಸಂಕಲನಗಳು. ಗೀಚುಗೆರೆ ಮತ್ತು ಚೈತ್ರ ಪಲ್ಲವ ಎಂಬ ಕಥಾ ಸಂಕಲನಗಳನ್ನೂ ಬರೆದಿದ್ದಾರೆ. ಅವರು ಬರೆದ ಕಾದಂಬರಿ ಮತ್ತು ನಾಟಕಗಳು ಮರಾಠಿ ಭಾಷೆಗೂ ಅನುವಾದಗೊಂಡಿವೆ.  ಕಾವ್ಯ ಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ಲೀಲೆ’ ಎಂಬ ಕವನ ನಿಮ್ಮ ಓದಿಗಾಗಿ.

ಲೀಲೆ

ಬೆಳ್ಳಿಚೊಗಚಿಯ ಚಂದ್ರ, ಮುಗಿಲ ಮಂಟಪದಲ್ಲಿ
ತಾರೆಗಳ ಬಳಗದಲಿ ರಂಜಿಸಿರಲು ||
ಗಂಧವಾಹಕನಿಂದು ಕುಸುಮವತಿಯರನೆಲ್ಲ
ಚಂದಿರನ ಸ್ವಾಗತಕೆ ಬಳುಕಿಸಿರಲು ||

ಮುಗಿಲ ಮಾನಸದಲ್ಲಿ ರಾಜಹಂಸಗಳಂತೆ
ತಿಳಿಮೋಡಗಳು ಮೆಲನೆ ತೇಲುತಿರಲು ||
ಮೇದಿನಿಗೆ ಮೊದಲಾಗಿ ಹುಲ್ಲಿಗೂ ಕಡೆಯಾಗಿ
ಎದೆತುಂಬಿ ಹಿಡಿಸದಲೆ ನಗುತಲಿರಲು ||

ಹೊಚ್ಚಹೊಸ ಪಲ್ಲವದ ಬೆಚ್ಚನೆಯ ಮನೆಯಲ್ಲಿ
ಈ ಪಕ್ಷಿ ದಂಪತಿಗದೆಂಥ ನಿದ್ರೆ ||
ಮೈ ಕೊರೆವ ಮಾಗಿಯೂ ಮಧುಮಾಸವಾಗಿರಲು
ನಲ್ಲೆ -ನಲ್ಲರಿಗಾರ ಯೋಗ ಮುದ್ರೆ ||

ತಂಗದಿರ ಹೊಳೆದಾಗ ಗಾಳಿಯಲೆ ಸುಳಿದಾಗ
ಜೀವ ಕುಮುದಿನಿ ಮೆಲ್ಲನರಳುತ್ತಿತ್ತು ||
ಯಾರ ಲೀಲೆಯ ಕನಸು ಎಂಬ ಭಾವನೆ ಮೂಡಿ
ನಸುಗುಂದಿ ಕಳೆ ಹೀನವಾಗುತ್ತಿತ್ತು ||

ಎಲೆಗಾಳಿ ! ಉಡುಗಣವೆ! ಪಕ್ಷಿ ದಂಪದಿಗಳೇ
ಅರಳಿದಿರಿ ನೀವಾರ ಕನಸದಾಗಿ ||
ಒಂದು ಕ್ಷಣವಾದರೂ ಕನಸುಗಳ ಕನಸಿಗನೆ!
ಮೂಡಿಬಾ ! ಎಳೆ ಬಿದಿಗೆ ಚಂದ್ರನಾಗಿ||

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ