Advertisement
ಮುನ್ನೂರ ಅರವತ್ತೈದು ದಿನಗಳ ಹೊಸ ತಃಖ್ತೆ!

ಮುನ್ನೂರ ಅರವತ್ತೈದು ದಿನಗಳ ಹೊಸ ತಃಖ್ತೆ!

ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು. ನಿನ್ನೆ ನೆಲದಲ್ಲಿ ಇಂದಿನ ಗಿಡನೆಟ್ಟರೆ ನಾಳೆಯ ಮೊಗ್ಗು, ನಾಡಿದ್ದರ ಹೂ ಅರಳಬಹುದು. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂದು ದೊಡ್ಡವರು ಸುಮ್ಮನೆ ಹೇಳಿದ್ದಲ್ಲ.
ಹೊಸ ವರ್ಷದ ಹೊಸ ಹಾದಿಗಳ ಕುರಿತು ಸದಾಶಿವ ಸೊರಟೂರು ಪ್ರಬಂಧ

ದಿನಕ್ಕೊಂದು ಹೂ ಬಿಡುತ್ತಾ ಕಳೆಕಳೆಯಾಗಿರುತ್ತಿದ್ದ ಕ್ಯಾಲೆಂಡರ್ ಮನೆಯ ಗೋಡೆಯ ಮೊಳೆಯಿಂದ ಕಳಚಿ ಬೀಳುತ್ತದೆ, ಹಣ್ಣಾದ ಎಲೆ ಉದುರುವಂತೆ. ಅಲ್ಲೊಂದು ಮತ್ತೆ ಮುನ್ನೂರಾ ಅರವತ್ತೈದು ದಿನಗಳ ತಃಖ್ತೆ. ಹೊಸ ಗಿಡ, ಮತ್ತೆ ಮತ್ತೆ ಹೂವುಗಳು. ಹೂವು ಉದುರುವಾಗ ಮೊಗ್ಗು ನಗುತ್ತದೆ. ಎಲ್ಲವೂ ಹಾಗೆ ಇದೆ ಕ್ಯಾಲೆಂಡರ್ ಅಷ್ಟೆ ಬದಲಾಗಿದೆ ಅಂತೀವಿ. ನಮಗೆ ಗೊತ್ತಿಲ್ಲದೆ ಏನೆಲ್ಲಾ ಬದಲಾಗಿರುತ್ತೆ. ನಮ್ಮ ರೆಸ್ಯೂಮ್‌ನಲ್ಲಿ ವಯಸ್ಸು ಒಂದು ವರ್ಷ ಹೆಚ್ಚಾಗುತ್ತೆ. ನಮ್ಮ ಮಗು ಒಂದು ತರಗತಿ ಮುಂದೆ ಜಿಗಿದಿರುತ್ತೆ. ಅಪ್ಪನಿಗೆ ಮಂಡಿನೋವು ಹೆಚ್ಚು. ನಿಮಗೊಂದು ಪ್ರಮೋಶನ್ ಸಿಕ್ಕಿದೆ. ಪ್ರೀತಿಸಿದ ಹುಡುಗಿ ನೆನಪು ಈಗ ಅಷ್ಟಾಗಿ ಕಾಡುವುದಿಲ್ಲ. ಕಾಲ ಅಂದರೆ ಹಾಗೆಯೇ ಬರೀ ಕ್ಯಾಲೆಂಡರ್ ಬದಲಾಗುವುದಲ್ಲ ಜೊತೆಗೆ ನಾವು, ನೀವು ಮತ್ತು ಎಲ್ಲವೂ..

ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು. ನಿನ್ನೆ ನೆಲದಲ್ಲಿ ಇಂದಿನ ಗಿಡನೆಟ್ಟರೆ ನಾಳೆಯ ಮೊಗ್ಗು, ನಾಡಿದ್ದರ ಹೂ ಅರಳಬಹುದು. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂದು ದೊಡ್ಡವರು ಸುಮ್ಮನೆ ಹೇಳಿದ್ದಲ್ಲ.

ಸಿಂಹ ಹಾದಿಯಲ್ಲಿ ನಡೆದು ಮುಂದೆ ಹೋಗಿ ನಂತರ ತಾನು ಬಂದ ದಾರಿಯನ್ನು ತಿರುಗಿ ನೋಡುವುದಂತೆ. ಅದು ಸಿಂಹಾವಲೋಕನ. ಹಿಂದಣ ಹೆಜ್ಜೆ ಅರಿತಲ್ಲದೆ ಮುಂದಣ ಹೆಜ್ಜೆ ಅರಿಯಲಾಗದು.. ಅನ್ನುತ್ತಾರೆ. ನಾವು ಇಡುವ ಹೆಜ್ಜೆಗೆ ಹಿಂದಿನ ಹಾದಿಯಲ್ಲಿ ಕಾಲಿಗೆ ಸಿಕ್ಕ ಹೂವು ಮುಳ್ಳಿನ ಅರಿವಿದ್ದರಷ್ಟೇ ಮುಂದಿನ ಹಾದಿ ಸ್ಪಷ್ಟ.

ಕೂತು, ಹಿಂದಿನದರ ಬಗ್ಗೆ ನೆನಪಿಸಿಕೊಳ್ಳಲು ಮತ್ತು ಮುಂದಿನದರ ಬಗ್ಗೆ ಯೋಚಿಸಲು ಒಂದು ದಿನ ಅಂತ ಬೇಕಲ್ಲ, ಎಲ್ಲರೂ ಒಪ್ಪುವಂತಹ ದಿನ ಬೇಕಲ್ಲ ಅದೇ ಈ ಕ್ಯಾಲೆಂಡರ್ ಬದಲಾವಣೆಯ ದಿನ. ಅದನ್ನು ಕೆಲವರು ಹೊಸ ವರ್ಷ ಅಂತಾರೆ, ಕೆಲವರು ಕ್ಯಾಲೆಂಡರ್ ಇಯರ್ ಅಂತಾರೆ. ಏನೇ ಆದರೂ ನಾವು ಗೊತ್ತಿಲ್ಲದೆ ಈ ಒಂದು ದಿನವನ್ನು ಹೊಸದು ಅಂತ ಒಪ್ಪಿ ಬಿಟ್ಟಿದ್ದೇವೆ. ಕೆಲವರು ನನಗೆ ಈ ದಿನ ಬೇಕಿಲ್ಲ ಅಂತಾರೆ.. ನನಗೆ ಬೇರೆಯದೆ ಹೊಸ ದಿನ ಇದೆ ಅಂತಾರೆ. ಕೆಲವರಿಗೆ ಬರ್ತ್ ಡೇ ಯಿಂದ ಬರ್ತ್ ಡೇ, ಕೆಲವರಿಗೆ ಯುಗಾದಿ, ಕೆಲವರಿಗೆ ಮೋಹರಂ ಇವೆಲ್ಲಾ ಅವರವರ ಭಾವಕ್ಕೆ, ಭಕುತಿಗೆ.. ಆದರೆ ಜಗತ್ತಿನ ಬಹುತೇಕರು ಒಪ್ಪಿ ಆಚರಿಸುವ ಈ ಜನವರಿ ಒಂದು ಅನ್ನೋದನ್ನ ಹೊಸ ವರ್ಷದ ಮೊದಲ ದಿನವೆಂದು ಯಾರಾದರೂ ಒಪ್ಪಿಯಾರು!

ರೈತನಿಗೆ ಮುಂಗಾರು ಹೊಸ ದಿನ, ಶಾಲೆಯ ಪೋರರಿಗೆ ಜೂನ್, ತೆರಿಗೆದಾರರಿಗೆ ಮಾರ್ಚ್, ಇದು ನಮ್ದು ಕಲ್ಚರ್ ಅನ್ನೋರಿಗೆ ಯುಗಾದಿ ಹೀಗೆ ನೂರೆಂಟು ತರಹದ ಹೊಸ ದಿನಗಳನ್ನು ಈ ಕ್ಯಾಲೆಂಡರ್ ಇಯರ್ ತನ್ನ ಒಡಲೊಳಗೆ ಹಾಕಿಕೊಂಡಿದೆ.

ಒಮ್ಮೆ ಯಾರೊ ಜೆನ್ ಗುರುವಿಗೆ ಕೇಳಿದರಂತೆ

‘ಗುರುಗಳೇ ಇಲ್ಲಿ ತುಂಬಾ ಕಲೆಯುಳ್ಳದ್ದು ಯಾವುದು?’

‘ಚಂದಿರನ ಬೆಳಕು’ ಗುರುಗಳು ಉತ್ತರ

‘ಗುರುಗಳೇ ಹಾಗಾದರೆ ಆ ಕಲೆಯ ಸ್ವಚ್ಚಗೊಳಿಸುವುದು ಯಾವುದು?’

‘ಚಂದಿರ ಬೆಳಕು’ ಮತ್ತೆ ಗುರುಗಳ ಉತ್ತರ.‌

ಕಲೆ ಮಾಡುವ ಬೆಳಕೇ ಕಲೆಯನ್ನು ತೊಳೆಯುತ್ತದೆ. ಗಾಯಗೊಳಿಸುವ ಬದುಕೇ, ಮುಲಾಮು ಸವರುತ್ತದೆ. ಚುಚ್ಚುವ ಕಾಲವೇ ಗಾಯವನ್ನು ಮಾಯಿಸುತ್ತದೆ. ಹೊಸ ದಿನಗಳಿಗೆ ಸಿದ್ಧರಾಗುವುದು ಎಂದರೆ ಯಾವ ಹೊಸ ಗಾಯಕ್ಕೆ ಸಿದ್ಧರಾಗುವುದೇ ಎಂದೇ ಅರ್ಥ. ಅದು ಅದೆಷ್ಟು ಅಲ್ಲ ಹೊಸ ಮದ್ದಿಗೆ ಸಿದ್ಧವಾಗುವುದು ಅಂತ.

ಹಳೆಯದೆಲ್ಲವನ್ನು ಮುಂದೆ ಹರಡಿಕೊಂಡು ಬದುಕಿನ ಜಾತ್ರೆ ಮಾಡಲಾಗುವುದಿಲ್ಲ. ಎಲ್ಲವನ್ನು ಮರೆತು ಕೂಡ ಬದುಕಲಾಗುವುದಿಲ್ಲ. ಯಾವುದು ಉಳಿಸಬೇಕು? ಯಾವುದನ್ನು ಅಳಿಸಬೇಕು ಅನ್ನುವುದು ‘ಕಾಲ’ ಕ್ಕೆ ಗೊತ್ತಿದೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಲದ ಲೆಕ್ಕದಲ್ಲಿ ಎಲ್ಲವೂ ಸರಿ ಇದೆ ನಾವು ಅದನ್ನು ಕೆಡಿಸಲು ಹೋದರೆ, ಕೆಡಿಸಿಕೊಂಡರೆ ಅನುಮಾನವೇ ಇಲ್ಲ ಅದು ನಮ್ಮನ್ನು ಕೆಡಿಸುತ್ತದೆ.

ಬಿಡಿ ಅದಿರಲಿ,
ಅಮ್ಮ ಹೇಗೆ ನಾವು ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಬಲಗಡೆಯಿಂದ ಏಳಪ ಅಂತ ಗದರಿಸುತ್ತಿದ್ದರು. ದಿನವಿಡೀ ನಾವೇನಾದ್ರು ಎಡವಟ್ಟು ಮಾಡಿದರೆ ‘ಎಡಗಡೆ ಮಗ್ಲಾಗೆ ಎದ್ದಿಯೇನು..?’ ಅನ್ನುತ್ತಿದ್ದರು. ದಿನವೊಂದು ಒಳ್ಳೆಯದಾಗಿ ಶುರುವಾದರೆ ಇಡೀ ದಿನ ಒಳ್ಳೆಯದಾಗುತ್ತೆ ಅನ್ನುವುದು ಅಮ್ಮನ ನಂಬಿಕೆ. ಹಾಗೆ ಹೊಸ ವರ್ಷದ ಮೊದಲು ದಿನದ ಹಾರೈಕೆಗಳು, ಕಳೆಯುವ ಕ್ಷಣಗಳು ವರ್ಷಪೂರ್ತಿ ನಮ್ಮ ಜೊತೆ ಇರುತ್ತವೆ, ಕೈ ಹಿಡಿಯುತ್ತವೆ ಅನ್ನುವ ಕಾರಣಕ್ಕೆ ಈ ದಿನಕ್ಕೆ ಒಂದು ವಿಶೇಷ ಕಾಳಜಿ, ವಿಶೇಷ ಸಂಭ್ರಮ. ಅಂತಹ ಹಾರೈಕೆಗಳು ನಮ್ಮನ್ನು ಪೊರೆಯಲಿ..

ತಾನು ಸರಿಯಿಲ್ಲ, ತನ್ನಲ್ಲಿ ಏನೊ ಒಂದು ಬೇಡದ ಗುಣ ಇದೆ ಅನ್ನುವ ಭಾವ ಪ್ರತಿಯೊಬ್ಬರಿಗೂ ಇರುತ್ತೆ. ಅದನ್ನು ಬಿಡಲು ನಿರ್ಧರಿಸಿದವರು ಒಂದು ದಿನಕ್ಕೆ ಕಾಯ್ತಾರೆ. ನಾನು ಅಂದಿನಿಂದ ನೋಡು ಹೇಗಿರ್ತೀನಿ’ ಅಂತಾರೆ. ಅಂತಹ ಕಾರ್ಯಕ್ಕೆ ಮರೆಯಲಾಗದ ಒಂದು ದಿನ ಬೇಕಾದರೆ ನೀವು ಈ ಹೊಸ ದಿನವನ್ನು ಆಯ್ದಿಟ್ಟುಕೊಳ್ಳಬಹುದು..

ಹೊಸದಿನ, ಹಳೆ ಬದುಕು. ನಿಮ್ಮ ನಿರ್ಧಾರಗಳು ಹಳೆ ಬದುಕನ್ನು ಹೊಸ ದಿಕ್ಕಿನೆಡೆ ಕರೆದುಕೊಂಡು ಹೋಗಲಿ. ನಾನು ಬೆಳಗ್ಗೆ ಬೇಗ ಏಳ್ತೀನಿ, ಈ ವರ್ಷ ಒಂದು ನೌಕರಿ ಹಿಡಿತೀನಿ. ಕಥೆ ಬರಿತೀನಿ, ಮದುವೆ ಆಗ್ತೀನಿ.. ಅನ್ನುವ ನಿರ್ಧಾರಗಳು ನಿಮಗೆ ಬಿಟ್ಟಿದ್ದು. ಅದು ನಿಮಗೆ ಲಾಭ. ಆದರೆ ನಿಮ್ಮ ಸಣ್ಣ ಸಣ್ಣ ನಿರ್ಧಾರಗಳಿಂದ ಬೇರೆಯವರಿಗೆ ಆಗುವ ದೊಡ್ಡ ಲಾಭಗಳಿವೆ. ಖಂಡಿತ ಅಂತಹ ನಿರ್ಧಾರಗಳು ಆಗಬೇಕು.

ಬಸ್ಸಿನಲ್ಲಿ ಯಾರಾದರೂ ಪಕ್ಕ ಕೂತರೆ ಸರಿದು ಅವರಿಗೆ ಅರಾಮಾಗಿ ಕೂರಲು ಅವಕಾಶ ಕೊಡ್ತೀನಿ, ಖಂಡಿತ ನಾನು ಇನ್ಮೇಲೆ ಹೊರಗೆ ಎಲ್ಲೂ ಸುಮ್ಮನೆ ಉಗಿಯುವುದಿಲ್ಲ. ಯಾರಾದರೂ ನನ್ನ ಜೊತೆ ಮಾತಾಡುವಾಗ ನಾನು ನನ್ನ ಮೊಬೈಲ್‌ನ ಕೈಯಲ್ಲಿಡಿದು ತೀಡುವ ಬದಲು ಜೇಬಿನಲ್ಲಿಟ್ಟುಕೊಳ್ತೀನಿ, ಮನೆಯಲ್ಲಿ ಮಕ್ಕಳೊಂದಿಗೆ ಆಟ ಆಡ್ತೀನಿ, ಯಾರೊ ವಿಳಾಸ ತಪ್ಪಿ ಬಂದರೆ ಅವರನ್ನು ಉಡಾಫೆ ಮಾಡದೆ ವಿಳಾಸಕ್ಕೆ ತಲುಪಿಸುತ್ತೀನಿ, ವಯಸ್ಸಾದ ಅಜ್ಜಿ ಇಳಿಯುವ ಊರು ಗೊತ್ತಿಲ್ಲದ ಆತಂಕದಲ್ಲಿದ್ದರೆ ಅಜ್ಜಿ ಅರಾಮಾಗಿರಿ ನಾನು ಊರು ಬಂದಾಗ ಇಳಿಸುತ್ತೀನಿ ಅಂತ ಹೇಳಿ ಕಂಫರ್ಟ್ ಕೊಡೋದು, ಫೇಸ್ಬುಕ್‌ನಲ್ಲಿ ಕಮೆಂಟು ಮಾಡುವಾಗ ಖಂಡಿತ ಸಭ್ಯ ಭಾಷೆ ಬಳಸುತ್ತೀನಿ, ವಾಟ್ಸಪ್‌ಗಳಲ್ಲಿ ಸಿಕ್ಕಿದೆಲ್ಲಾ ಫಾರ್ವಡ್ ಮಾಡಿ ಬೇರೆಯವರಿಗೆ ಹಿಂಸೆ ಕೊಡದೆ ಇರ್ತೀನಿ, ಪಬ್ಲಿಕ್‌ನಲ್ಲಿ ಜೋರಾಗಿ ಮೊಬೈಲ್ ಕಿರುಚುವುದಿಲ್ಲ, ನಾಲ್ಕು ಜನ ಇದ್ದ ಕಡೆ ಸಿಗರೇಟು ಸೇದುವುದಿಲ್ಲ, ಒಬ್ಬರು ಹೇಳಿದ್ದನ್ನು ಇನ್ನೊಬ್ಬರ ಬಳಿ ಹೇಳುವುದಿಲ್ಲ… ಎಷ್ಟೊಂದಿದೆ!

ಮನುಷ್ಯ ಒಳ್ಳೆಯವನಾಗುವುದು ದೊಡ್ಡ ದೊಡ್ಡ ವಿಚಾರಗಳಿಂದಲ್ಲ. ಸಣ್ಣ ಸಣ್ಣ ನಡವಳಿಕೆಗಳಿಂದ. ನಮ್ಮಿಂದ ಏನಾದರೂ ಕೊಡಬೇಕು ಅಂತಿದ್ರೆ ಸಾಧ್ಯವಾದಷ್ಟು ಅವರಿಗೆ ನಮ್ಮಿಂದ ಕಂಫರ್ಟ್ ಕೊಡುವುದು. ಅಂತಹ ಕಂಫರ್ಟ್ ಈ ಹೊಸ ವರ್ಷದ ದಿನ ನಮ್ಮ ನಿರ್ಧಾರವಾಗಲಿ ಅಲ್ಲವೆ..

ನಾನು ಈ ವರ್ಷ ಪುಸ್ತಕ ಓದ್ತೀನಿ, ಬೆಳಗ್ಗೆ ವಾಕ್ ಹೋಗ್ತೀನಿ, ಸಂಗೀತ ಕೇಳ್ತೀನಿ, ದಾನ ಮಾಡ್ತೀನಿ ಇಂತಹ ನೀವಷ್ಟೇ ಬೆಳೆಯುವ ಕಡಕ್ ನಿರ್ಧಾರಗಳ ಜೊತೆ ಬೇರೆಯವರಿಗೆ ನಾವು ಕೊಡುವ ಒಂದು ಕಂಫರ್ಟ್ ಬಗ್ಗೆ ಯೋಚಿಸೋಣ..

ಹ್ಯಾಪಿ ನ್ಯೂ ಇಯರ್!

(ವಿನ್ಯಾಸ: ರೂಪಶ್ರೀ ವಿಪಿನ್)

About The Author

ಸದಾಶಿವ ಸೊರಟೂರು

ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹೆಸರಿಲ್ಲದ ಬಯಲು' ಮತ್ತು ' ತೂತು ಬಿದ್ದ ಚಂದಿರ' (ಕವನ ಸಂಕಲನ)  ಹಾಗೂ  ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.

1 Comment

  1. ಎಸ್. ಪಿ. ಗದಗ.

    ಸರ್, ನಮ್ಮ ಕೈಲಿ ಏನು ಕೊಡಲಿಕ್ಕೆ ಆಗುತ್ತದೆ ಎನ್ನುವವರಿಗೆ ಎಷ್ಟೊಂದು ಒಳ್ಳೆಯ ವಿಚಾರ ತಿಳಿಸಿದ್ಫಿರಿ. ನಾವು ಇನ್ನೊಬ್ಬರಿಗೆ ಬೆಲೆ ಕಟ್ಟಲಾಗದ ಕಂಫರ್ಟ್ ಗಳನ್ನು ಕೊಟ್ಟು,ನಾವು ಕೂಡ ಅವರ ಜೊತೆ ಖುಷಿಯಾಗಿರಬಹುದು ಅನ್ನುವ ವಿಚಾರ ಹೊಸ ವರ್ಷಕ್ಕೆ ಸೂಕ್ತವಾಗಿದೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ