Advertisement
ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಅವ್ವ – ಒಂದು ಸ್ಫೂರ್ತಿದಾಯಕ ಕಥೆ !

ಬರಿದಾದ ಕೈ, ಒಲೆಯ‌ ಮೇಲೆ
ಹಸಿದು ಬೆಯ್ಯುವ ಪಾತ್ರೆ
ಧರೆಗೂ ದಿಗಂತಕ್ಕೂ ಕಣ್ಮಿಣುಕೆ
ಬೆಳಕು, ಶರ ಮೆಟ್ಟಿಲು…
ಅರ್ಜುನ ಅಂಬರದಿಂದ
ಶ್ವೇತಗಜವ ಕರೆತಂದ ಕತೆ ಹೇಳಿ
ಅವ್ವ ಹೊಟ್ಟೆ ತುಂಬಿಸುತ್ತಿದ್ದಳು;
ಅಪ್ಪ ಬಾಟಲಿಯ ಜೊತೆ
ಸಂಸಾರವೂಡುತ್ತಿದ್ದ!

ಯಾರನ್ನ ಕೇಳುವುದು? ಮಿಡತೆ
ಹಣತೆಗೆ ಮಾರುಹೋದರೆ?
ನಾಯಿ ಹೊಲಸಿಗೆ ಆಸೆ ಪಟ್ಟರೆ?
ಅವರವರ ಜನುಮ; ಅವರವರ ಇಚ್ಛೆ
ದುಗುಡವಿಲ್ಲದೆ ಹೊದ್ದು ಮಲಗಿದರೂ
ಹೊಟ್ಟೆ ಕೇಳುತ್ತಿರಲಿಲ್ಲ ಮಾತು!

ಬಡತನದ ಹುಟ್ಟು ಕೀಳಲ್ಲ ಮಗನೆ,
ಬೆಳೆದು ನಿಲ್ಲಬೇಕು ಇವರಂತೆ ಅವರಂತೆ
ಸ್ಫೂರ್ತಿ ತುಂಬುವ ಕಥೆಗಳೂ
ಸಪ್ಪೆಯೆನಿಸುತ್ತಿದ್ದವು
ಉಪ್ಪಿಲ್ಲದ ಗಂಜಿ ಕಣ್ಣೆದುರಿದ್ದಾಗ!

ಹರಿದ ಪುಸ್ತಕಕ್ಕೆ ಹಿಟ್ಟೇ ಅಂಟಾಗ ಬೇಕಿತ್ತು;
ಹರಿದ ಬಟ್ಟೆಗೆ ಸೂಜಿಯೇ ನಂಟಾಗ ಬೇಕಿತ್ತು;
ಕಲ್ಲು ಬಗರೆಗಳ ಆಯುವ ಹೊತ್ತಲ್ಲಿ
ಕೈಗಳು ಹೊಂಗೆ ಬೇವಿನ ಹರಳುಗಳ ಹೆಕ್ಕುತ್ತಿದ್ದವು.
ಚಿಲ್ಲರೆ ಕಾಸಿಗೆ ಕಿಸೆ ತೆರೆದುಕೊಳ್ಳುತ್ತಿತ್ತು.

ಯೌವ್ವನದಲ್ಲಿ ಪ್ರೀತಿ ಹುಟ್ಟಿ
ಒಣಕಲ ಬಡಕಲು ದೇಹಕ್ಕೆ
ಹುಡುಗಿಯೊಬ್ಬಳು ಹೇಸಿ ಮಾನ ಕಳೆದಾಗ
ಜಗ ನಿರ್ಜೀವವೆನಿಸಿದರೂ
ಅವ್ವ ಕಿವಿಯಿಂಡುತ್ತಿದ್ದಳು;
ಗೈರುಹಾಜರಿಯಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಳು!

ನನ್ನದೇನೂ ತಪ್ಪಿಲ್ಲ; ನಾನು ನಿರ್ದೋಷಿ!
ಅಪ್ಪನ ದುಡಿಮೆಯ ಫಲವ
ಅನು-ಭೋಗಿಸಲು ಹುಟ್ಟು ಪಡೆದಿಲ್ಲ;
ರಟ್ಟೆಯ ನರ ಹೆಪ್ಪುಗಟ್ಟುವವರೆಗೂ
ದುಡಿದು, ಗುಡಿಸಲಿಗೆ ತೇಪೆಯಾಕಿ ಬದುಕುತ್ತೇನೆ
ತೊಳ್ತೆಕ್ಕೆಗೆ ನಂಬಿಕೆಯಿದ್ದವಳು ಬರಲಿ
ಸ್ವಾಭಿಮಾನ ಸೊಕ್ಕೇಳುತ್ತಿತ್ತು!

ಅಂಬಲಿಯ ರುಚಿಬಲ್ಲವರು;
ಎಲ್ಲಿದ್ದರೂ ಬದುಕ ಕಟ್ಟಬಲ್ಲರು!
ಈಗ ಪ್ರಶ್ನೆಯೆದ್ದಿರುವುದು –
ಇಡ್ಲಿ, ವಡೆ, ಸಾಂಬಾರಿನವರದು!

ಸಪ್ಪೆಯೆನಿಸಿದ ಕತೆಗಳೂ ಇಂದು,
ರುಚಿಸುತ್ತಿವೆ ನನಗೆ!
ಏಕೆಂದರೆ, ನಾನು ಬದುಕುವ ರೀತಿ ಕಲಿತದ್ದು
ಅವ್ವನಿಂದಲೇ ವಿನಃ; ಕುಡುಕ ಅಪ್ಪನಿಂದಲ್ಲ!
ಬರೀ ಇಲ್ಲಗಳ ನಡುವೆಯೇ ಬದುಕಿದ್ದ ಅವ್ವ;
ಈಗ ರುಚಿಸುವ ಸ್ಫೂರ್ತಿದಾಯಕ ಕಥೆ!

About The Author

ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ