Advertisement
ಹಳೆಯ ಮೈಸೂರಿನ ಪಳೆಯ ಮುಖಗಳು: ಅಬ್ದುಲ್ ರಶೀದ್ ಅಂಕಣ

ಹಳೆಯ ಮೈಸೂರಿನ ಪಳೆಯ ಮುಖಗಳು: ಅಬ್ದುಲ್ ರಶೀದ್ ಅಂಕಣ

ಅನಂತಮೂರ್ತಿಯವರ ಅಂತ್ಯಕ್ರಿಯೆಯ ದಿನ ಇಲ್ಲೇ ಮೈಸೂರಿನ ಬೆಂಕಿ ನವಾಬ್ ರಸ್ತೆಯಲ್ಲಿ ಬದುಕುತ್ತಿರುವ ಅವರ ಹಿರಿಯ ಸಹೋದ್ಯೋಗಿ ಪ್ರೊಫೆಸರ್ ಇಸ್ಮಾಯಿಲ್ ಖಾನ್ ದುರಾನಿಯವರ ಬಳಿ ಹೋಗಿ ಸುಮ್ಮನೇ ಮಾತನಾಡುತ್ತ ಕುಳಿತಿದ್ದೆ. ಪ್ರೊಫೆಸರ್ ದುರಾನಿಯವರು ಹುಟ್ಟಿ ಬೆಳೆದು ಬದುಕುತ್ತಿರುವ ಈ ಮನೆ ಸುಮಾರು ನೂರಾ ಐವತ್ತು ವರ್ಷಗಳಿಗಿಂತ ಹಳೆಯದ್ದು.

ಮೈಸೂರು ವಿಶ್ವವಿಧ್ಯಾನಿಲಯದಲ್ಲಿ ಪ್ರೊಫೆಸರಾಗಿ ನಿವೃತ್ತರಾದ ದುರಾನಿಯವರು ಒಂದು ರೀತಿಯಲ್ಲಿ ಶೇಕ್ಸ್ ಪಿಯರನ ಸ್ಕೂಲಿಗೆ ಸೇರಿದವರು. ತೀರಾ ಹರಿತವಲ್ಲದ ಸಾದಾ ವ್ಯಂಗ್ಯ, ತೀರಾ ತೀಕ್ಷ್ಣವಲ್ಲದ ಸಾದಾ ವಿಮರ್ಶೆ ಜೊತೆಗೆ ಬದುಕನ್ನು ಹಾಗೇ ನೋಡುತ್ತಾ ಅನುಭವಿಸುತ್ತಾ ಬದುಕಬೇಕು ಎನ್ನುವಂತಹ ಸರಳವಾದ ಜೀವನ ದೃಷ್ಟಿ. ಹೀಗೆ ಇರುವುದರಿಂದಲೇ ಅವರು ಈ ಎಂಬತ್ತಾರರ ಇಳಿ ವಯಸಿನಲ್ಲೂ ನಗೆ ಚಟಾಕಿಗಳನ್ನು ಹಾರಿಸುತ್ತಾ, ಶೇಕ್ಸ್ ಪಿಯರನ ಸಾಲುಗಳನ್ನು ಉಲ್ಲೇಖಿಸುತ್ತಾ, ನಡುನಡುವಲ್ಲಿ ಟೇಪ್ ರೆಕಾರ್ಡಿನಲ್ಲಿ ಹಳೆಯ ಹಾಡುಗಳನ್ನು ಕೇಳುತ್ತಾ , ತಮ್ಮ ಹಳೆಯ ಪಳೆಯ ನೆನಪುಗಳನ್ನು ಇಲ್ಲಿನ ಸ್ಥಳೀಯ ಆಂಗ್ಲ ಪತ್ರಿಕೆಯಲ್ಲಿ ಬರೆಯುತ್ತಾ ಬದುಕುತ್ತಿದ್ದಾರೆ. ಈ ನೆನಪುಗಳು ಎಷ್ಟು ಆತ್ಮೀಯವೂ ನಿರುಮ್ಮಳವೂ ಆಗಿರುತ್ತವೆಂದರೆ ಈ ಬರಹಗಳಲ್ಲಿ ಬರೆದಾತ ಎದ್ದು ಕಾಣಿಸುತ್ತಿರುವುದೇ ಇಲ್ಲ. ಸುಮ್ಮನೆ ಒಬ್ಬ ಒಂದು ಸಂಗತಿಯ ನಡುವೆ ಹಾದು ಹೋದಂತೆ, ಹಾಗೆ ಹೋಗುತ್ತಿರುವಾಗ ಅದನ್ನು ವಿವರಿಸಿ ಅಲ್ಲಿಂದ ಎದ್ದು ಹೋದಂತೆ ಇರುತ್ತದೆ ಅವರ ವಿವರಣೆ.

ನಾನು ಅವರ ಬಳಿ ಹೋಗಿದ್ದ ಉದ್ದೇಶ ಅವರು ಬದುಕುತ್ತಿರುವ ಆ ಬೆಂಕಿ ನವಾಬ್ ರಸ್ತೆಗೆ ಆ ಹೆಸರು ಯಾಕೆ ಬಂತು ಎಂದು ಅವರಿಗೇನಾದರೂ ಗೊತ್ತಿದೆಯೇ ಎಂದು ಕೇಳಲು. ಅದಕ್ಕೂ ಮೊದಲು ಬೇರೆಯವರು ಹೇಳಿದ ಪ್ರಕಾರ ಆ ಬೀದಿಯಲ್ಲಿ ಬಹಳ ಹಿಂದೆ ಒಬ್ಬ ಮುಸಲ್ಮಾನ ವರ್ತಕನಿದ್ದನು ಮತ್ತು ಆತನಿಗೆ ಬೆಂಕಿಯಂತಹ ಸಿಟ್ಟು ಇತ್ತು. ಅದು ಎಷ್ಟರ ಮಟ್ಟಿಗಿನ ಸಿಟ್ಟು ಅಂದರೆ ಆ ಬೆಂಕಿಯಂತಹ ಸಿಟ್ಟಿಗೆ ಆತನ ಮಡದಿಯೇ ಆಹುತಿಯಾಗಿತ್ತು ಎಂಬುದಾಗಿತ್ತು. ಇನ್ನು ಒಬ್ಬರು ಸುಲ್ತಾನ್ ಟೀಪುವಿನ ಕಾಲದ ನವಾಬನೊಬ್ಬ ಅನ್ಯಧರ್ಮೀಯರನ್ನು ಕಂಡರೆ ಉರಿದು ಬೀಳುತ್ತಿದ್ದ ಅದಕ್ಕಾಗಿ ಈ ಬೀದಿಗೆ ಈ ಹೆಸರು ಬಂತು ಎಂದು.

ಆದರೆ ಪ್ರೊಫೆಸರ್ ದುರಾನಿಯವರು ಹೇಳಿದ ಕಾರಣ ಹೆಚ್ಚುಕಡಿಮೆ ಕರಾರುವಾಕ್ಕಾಗಿತ್ತು. ಅದೇನೆಂದರೆ ಅವರ ಮನೆಯ ಹಿಂಬದಿಯಲ್ಲಿ ಈಗ ಒಂದು ಹಳೆಯ ಕಾಲದ ಸರಕಾರೀ ಆಸ್ಪತ್ರೆ ಇದೆ. ಆ ಜಾಗದಲ್ಲಿ ಹಿಂದೆ ನವಾಬ್ ಎಂಬವರ ನಿವಾಸವಿತ್ತು. ಆ ನಿವಾಸಕ್ಕೆ ಹಿಂದಿನ ಕಾಲದಲ್ಲಿ ಬೆಂಕಿ ಬಿದ್ದು ಅದು ನಾಶವಾಯಿತು. ಆದರೆ ಆ ನವಾಬ್ ಎಂಬವರ ಹೆಸರು ಬೆಂಕಿ ನವಾಬ್ ಎಂದೇ ಹೆಸರುವಾಸಿಯಾಯ್ತು. ಜೊತೆಗೆ ಆತ ಇದ್ದ ಈ ರಸ್ತೆಗೂ ಬೆಂಕಿ ನವಾಬ್ ಎಂಬ ಹೆಸರೂ ಶಾಶ್ವತವಾಯಿತು. ಇದೇ ಈ ರಸ್ತೆಯ ಕಥೆ ಎಂದು ದುರಾನಿಯವರು ಹೇಳಿದ್ದರು.

ಮೊನ್ನೆ ಮೈಸೂರಿನ ದೇವರಾಜ ಮಾರುಕಟ್ಟೆಗೆ ತಾಗಿಕೊಂಡಂತಿರುವ ಆನೆ ಸಾರೋಟು ರಸ್ತೆಗೆ ಮೀನು ಕೊಳ್ಳಲು ಹೊರಟವನು ಪುನಃ ಪ್ರೊಫೆಸರ್ ದುರಾನಿಯವರ ಬಳಿ ಮಾತನಾಡಿಸಿಕೊಂಡು ಬರಲು ಹೋಗಿದ್ದೆ.ಅವರ ಎದುರಲ್ಲಿ ಇನ್ನೊಬ್ಬರು ಮದ್ಯ ವಯಸ್ಕರು ಕೈಯಲ್ಲಿ ಸ್ವಲ್ಪ ಹಾಳಾದ ದಾಳಿಂಬೆ ಹಣ್ಣುಗಳ ಪೊಟ್ಟಣವನ್ನು ಹಿಡಿದುಕೊಂಡು ಕುಳಿತಿದ್ದರು. ಅವರು ಮೈಸೂರಿನ ಹಿರಿಯರೂ ಖ್ಯಾತರೂ ಆದ ಉರ್ದು ಕವಿಗಳೊಬ್ಬರ ಮಲ ಸಹೋದರ ಮತ್ತು ಸ್ವತಃ ತಾವೂ ಕವಿಗಳಾದವರಾಗಿದ್ದರು. ಅವರ ಮನೆಯಲ್ಲಿ ಒಂದು ಮಾತನಾಡುವ ಗಿಳಿ ಇದೆಯೆಂದೂ ಅದಕ್ಕೆ ದಾಳಿಂಬೆ ಇಷ್ಟವೆಂದೂ ಅವರು ದಾಳಿಂಬೆ ಕೊಳ್ಳಲು ಮಾರುಕಟ್ಟೆಗೆ ಬಂದವರು ಹಾಗೇ ಪ್ರೊಫೆಸರ್ ದುರಾನಿಯವರನ್ನು ನೋಡಲು ಬಂದಿದ್ದರು. ಬಹುಶಃ ಅವರೊಡನೆ ಮಾತನಾಡಿ ಸುಸ್ತಾಗಿದ್ದ ದುರಾನಿಯವರು ನನ್ನನ್ನು ಕಂಡೊಡನೆ ಅವರನ್ನು ಪರಿಚಯಿಸಿ ನಮ್ಮಿಬ್ಬರನ್ನು ಮಾತಿಗೆ ಬಿಟ್ಟು ತಾವು ಮೌನವಾಗಿ ಕೂತಿದ್ದರು. ಕವಿಗಳು ಮತ್ತು ಮಾತನಾಡುವ ಗಿಳಿಗಳು ಈ ಎರಡರ ಕುರಿತೂ ಸಮಾನ ಆಸಕ್ತಿ ಇರುವ ನಾನು ಅವರ ಹೆಸರು ವಿಳಾಸಗಳನ್ನು ಪಡೆದುಕೊಂಡು ಆದಷ್ಟು ಬೇಗ ಅವರನ್ನು ಕಾಣಲು ಬರುವುದಾಗಿ ತಿಳಿಸಿ ಅಲ್ಲಿಂದ ಬಂದಿದ್ದೆ.

ಮೈಸೂರಿನ ಲಷ್ಕರ್ ಮೊಹಲ್ಲಾದ ಅಲ್ಲಾ ಮಸೀದಿಯ ಎದುರು ರೋಡಿನ ಬಾಜಿನಲ್ಲಿ ಬಹಳ ಪ್ರಖ್ಯಾತವಾದ ಸಮೋಸಾ ಅಂಗಡಿಯೊಂದಿದೆ. ಈ ಅಂಗಡಿಯ ಅನತಿ ದೂರದಲ್ಲಿ ಸ್ವಲ್ಪ ಒಂಟಿಯಾಗಿ, ಸ್ವಲ್ಪ ನೊಂದುಕೊಂಡಂತೆ ಈ ಉರ್ದು ಕವಿ ಸಹೋದರರ ಹಳೆಯ ಕಾಲದ ಮನೆಯಿದೆ. ಈ ಮನೆಯಲ್ಲಿ ಈ ಇಬ್ಬರು ಕವಿ ಸಹೋದರರೂ, ಅವರ ಒಂಟಿ ಸಹೋದರಿಯೂ ಮತ್ತು ಮಾತನಾಡುವ ಈ ಗಿಳಿಯೂ ಇದೆ.
ನಾನು ಇಷ್ಟೂ ಹೊತ್ತು ಆ ಕವಿಗಳ ಮನೆಯ ಒಂಟಿತನವನ್ನೂ ಆ ಗಿಳಿಯ ಆರ್ತ ಮಾತುಗಳನ್ನೂ ಕೇಳಿ ಬಂದು ಬರೆಯಲು ಕುಳಿತಿರುವೆ.

ಹಿರಿಯರೂ, ಖ್ಯಾತರೂ ಆದ ಈ ಉರ್ದು ಕವಿಗಳು ಕಳೆದ ಮೂವತ್ತು ವರ್ಷಗಳಿಂದ ಕಣ್ಣುಗಳು ಕಾಣಿಸದೆ ಕತ್ತಲಲ್ಲಿ ಬದುಕುತ್ತಿದ್ದಾರೆ. ಅದೂ ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಅವರಿಗೆ ಕಿವಿಗಳೂ ಕೇಳಿಸದೆ ಯಾವ ಸದ್ದುಗಳೂ ಮಾತುಗಳೂ ಇಲ್ಲದೆ ಅವರು ಕವಿತೆಗಳನ್ನು ಬರೆಯುತ್ತಾರೆ. ಅವರ ಎದುರುಗಡೆ ವೃತ್ತ ಪತ್ರಿಕೆಯಷ್ಟು ದೊಡ್ಡದಾದ ಹಾಳೆಗಳು ಆ ಹಾಳೆಯನ್ನು ಗೆರೆಗಳಂತೆ ಮಡಚಿ ಸಾಲುಗಳನ್ನಾಗಿ ಮಾಡಿಕೊಂಡು ಉರ್ದುವಿನ ಅಕ್ಷರಗಳನ್ನು ಊಹಿಸಿಕೊಂಡು ಅವರು ಬರೆಯುತ್ತಾರೆ. ಬರೆದಾದ ಮೇಲೆ ತಾನೇನು ಬರೆದಿರುವೆನೆಂದು ಓದಿ ಹೇಳಲು ಅವರು ತಮ್ಮ ಮಲ ಸಹೋದರನಲ್ಲಿ ಕೇಳಿಕೊಳ್ಳುತ್ತಾರೆ. ಆತ ಇವರಿಗೆ ಕೇಳಿಸುವಂತೆ ಕಿವಿಯ ಬಳಿ ಕಿರಿಚುವ ಧ್ವನಿಯಲ್ಲಿ ಓದಿ ಹೇಳಿದ್ದನ್ನು ಶಾಂತವಾಗಿ ಆಲಿಸಿ ಸರಿಪಡಿಸಿ ಪುನಃ ಹೇಳುತ್ತಾರೆ. ಅವರು ಸರಿ ಪಡಿಸಿ ಹೇಳಿದ್ದನ್ನು ಮಲ ಸಹೋದರ ಸರಿಪಡಿಸಿ ಬರೆದು ಕೊಳ್ಳುತ್ತಾರೆ. ಹೀಗೆ ಇವರಿಬ್ಬರೂ ಸೇರಿ ಕಳೆದ ಮೂವತ್ತು ವರ್ಷಗಳಲ್ಲಿ ನೂರಾರು ಕವಿತೆಗಳನ್ನೂ ಹತ್ತಾರು ಕವಿತಾಸಂಕಲನಗಳನ್ನೂ ಹೊರ ತಂದಿದ್ದಾರೆ. ಹಿರಿಯನಾದ ಖ್ಯಾತ ಕವಿಯ ಕವಿತೆಗಳನ್ನು ಸರಿಪಡಿಸಿ ಬರೆಯುತ್ತಾ ಬರೆಯುತ್ತಾ ಈ ಮಲ ಸಹೋದರ ತಾನೂ ಓರ್ವ ಕವಿಯೇ ಆಗಿ ಬಿಟ್ಟಿದ್ದಾರೆ.

ಇವರಿಬ್ಬರು ಮಲ ಸಹೋದರರು ಹೀಗೆ ಗಂಟೆಗಟ್ಟಲೆ ಕವಿತೆಯ ಜೊತೆ ಜೋರಾಗಿ ಕಿರುಚಿಕೊಳ್ಳುವಾಗ ಇವರ ಒಂಟಿ ಸಹೋದರಿ ಸದ್ದಿಲ್ಲದೆ ಅಡುಗೆಮನೆಯಲ್ಲಿ ಅಡ್ಡಾಡುತ್ತಿರುತ್ತಾಳೆ. ಆ ಹಳೆಯ ಮನೆಯ ಹಿತ್ತಲಿನಲ್ಲಿ ಮಾತನಾಡುವ ಆ ಗಿಳಿ ತಾನೂ ಯಾಕೆ ಸುಮ್ಮನಿರಬೇಕೆಂದು ಅರಚುತ್ತಿರುತ್ತದೆ. ಬೀಳ್ಕೊಳ್ಳುವ ಮೊದಲು ಬಾಗಿಲವರೆಗೆ ಬಂದಿದ್ದ ಕಿರಿಯ ಕವಿ ಗಟ್ಟಿಯಾಗಿ ನನ್ನನ್ನು ಆಲಂಗಿಸಿಕೊಂಡು ಸಲಾಂ ಹೇಳಿದರು. ನನಗೆ ಉರ್ದು ಬರುವ ಹಾಗಿದ್ದಿದ್ದರೆ ಅವರಿಬ್ಬರ ಕವಿತೆಗಳ ಹಿಂದಿನ ದುಃಖ ಮತ್ತು ಒಂಟಿತನ ನನ್ನನ್ನು ಇನ್ನಷ್ಟು ತಟ್ಟುತ್ತಿತ್ತು ಎಂದೂ ಹೇಳಿದರು. ಆದರೆ ಉರ್ದು ಗೊತ್ತಿಲ್ಲದಿದ್ದರೂ ಅವರಿಬ್ಬರ ಕವಿತೆಗಳ ಏಕಾಂತ ನನಗೆ ಜೋರಾಗಿಯೇ ತಟ್ಟಿತ್ತು. ಏಕೆಂದರೆ ಅವರಿಬ್ಬರು ತೀರಿಹೋದವರ ಕುರಿತು ಕವಿತೆಗಳನ್ನು ಬರೆಯುವುದರಲ್ಲಿ ಹೆಸರು ವಾಸಿಯಾಗಿದ್ದರು.ದೂರದೂರದ ಊರುಗಳಿಂದ ತೀರಿಹೋದವರ ಕಡೆಯವರು ಗೋರಿ ಕಲ್ಲುಗಳ ಮೇಲೆ ಬರೆಯಲು ಇವರಿಂದ ಕವಿತೆಗಳನ್ನು ಬರೆಸಿಕೊಂಡು ಹೋಗುತ್ತಿದ್ದರು.

ಇತ್ತೀಚೆಗೆ ತಾನೇ ತೀರಿಹೋದ ಮುಳಬಾಗಿಲಿನ ಕಡೆಯ ಮುಸಲ್ಮಾನ ವೈದ್ಯರೊಬ್ಬರ ಕಡೆಯವರು ಇವರಿಂದ ಬರೆಸಿಕೊಂಡ ಕವಿತೆ ಇನ್ನೂ ಹಸಿಹಸಿಯಾಗಿ ಅವರ ಟೇಬಲ್ಲಿನ ಮೇಲೆ ಕುಳಿತಿತ್ತು. ಅದಾಗ ತಾನೇ ಅದನ್ನು ಅದೇ ದುಃಖದಲ್ಲಿ ಅವರು ಓದಿ ಮುಗಿಸಿ ನನ್ನನ್ನು ಬೀಳ್ಕೊಡಲು ಬಾಗಿಲವರೆಗೆ ಬಂದು ಆಲಂಗಿಸಿಕೊಂಡಿದ್ದರು. ‘ಕವಿತೆಗಳು ಮೂಲತಃ ದುಃಖಿ ಮತ್ತು ಒಂಟಿ ಕನ್ನಡಾದಲ್ಲಾದರೂ ಉರ್ದುವಲ್ಲಾದರೂ ಕವಿಗಳು ಎಲ್ಲ ಕಡೆಯೂ ಮನುಷ್ಯರೇ ಅಲ್ಲವೇ’ ಎಂದು ನನಗೆ ಗೊತ್ತಿರುವ ಹರಕು ಮುರುಕು ಉರ್ದುವಿನಲ್ಲಿ ಹೇಳಿ ಬಂದಿದ್ದೆ.

(ಫೋಟೋಗಳು: ಲೇಖಕರವು)

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ